ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾವು ಮೇಳವನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಡಿ ಇದ್ದರು.
ಪ್ರಜಾವಾಣಿ ಚಿತ್ರ
ಮಂಗಳೂರು: ಕದ್ರಿ ಪಾರ್ಕ್ ನಲ್ಲೀಗ ಮಾವಿನ ಹಣ್ಣುಗಳ ಸುವಾಸನೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಮಾವು ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಬಾದಾಮಿ, ಅಲ್ಫಾನ್ಸೋ, ಬಂಗನಪಲ್ಲಿ, ಇಮಾಮ್ ಪಸಂದ್, ತೋತಾಪುರಿ, ರುಮಾನಿ, ಮುಂಡಪ್ಪ, ರಸಪೂರಿ, ಮಲ್ಗೋವಾ, ಹಾಮ್ಲೆಟ್, ಸಿಂಧೂರ, ಹನಿ ಡ್ಯೂ, ಕೇಸರ್, ಕಲಪಾಡಿ, ಕೊಂಕಣ್ ರುಚಿ, ಮಲ್ಲಿಕಾ ಹೀಗೆ ಹಲವಾರು ಜಾತಿಯ ಮಾವಿನ ಹಣ್ಣು ಗ್ರಾಹಕನ್ನು ಸೆಳೆಯುತ್ತಿವೆ.
ರಾಮನಗರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಬೆಳಗಾರರು ತಾವು ತೋಟಗಳಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಒಟ್ಟು 37ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳು ಮಾರಾಟಕ್ಕಿವೆ. ರಾಮನಗರದ ಗಮ್ಲೆಸ್ ಹಾಗೂ ಸ್ಥಳೀಯ ತಳಿಯ ಹಲಸಿನ ಹಣ್ಣುಗಳೂ ಇವೆ.
ಅಲ್ಫಾನ್ಸೋ ಮಾವಿನ ಹಣ್ಣು ಕೆಜಿಗೆ ₹180 ದರವಿದೆ. ಮಂಗಳೂರಿನ ಹಣ್ಣು ಪ್ರಿಯರಿಗೆ ನೈಸರ್ಗಿಕವಾಗಿ ಬೆಳೆದು ಹಣ್ಣು ಮಾಡಲಾದ ಮಾವು ಕಡಿಮೆ ದರದಲ್ಲಿ ಸಿಗಬೇಕೆಂದು ರೈತರ ಮನವೊಲಿಸಿ ಈ ಹಣ್ಣಿಗೆ ಕಡಿಮೆ ದರ ನಿಗದಿಪಡಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಡಿ. ತಿಳಿಸಿದರು.
ಥಾಯ್ಲೆಂಡ್ ಮೂಲದ ತಳಿ ‘ಬ್ರೂನಿ ಕಿಂಗ್’ ಒಂದು ಹಣ್ಣು ಒಂದೂವರೆ ಕೆಜಿಯಿಂದ ಎರಡು ಕೆಜಿಯವರೆಗೂ ತೂಕವಿರುತ್ತದೆ. ಇದರ ರುಚಿಯೂ ಉತ್ತಮವಾಗಿದ್ದು, 15 ದಿನ ಕೆಡದಂತೆ ಇಡಬಹುದು. ಮೂರು ವರ್ಷದ ಹಿಂದೆ ಕೋಲ್ಕತ್ತಾದಿಂದ ಬ್ರೂನಿ ಕಿಂಗ್ ಗಿಡಗಳನ್ನು ತಂದು ನೆಟ್ಟಿದ್ದೆ. ಐದು ಗಿಡಗಳಲ್ಲಿ ಈ ಬಾರಿ ಸುಮಾರು 20 ಕಾಯಿ ಬಂದಿದ್ದವು ಎಂದು ರಾಮನಗರದ ಸಿದ್ದರಾಜು ಹೇಳಿದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಪ್ರವೀಣ್ ಚಂದ್ರ ಆಳ್ವ ಇದ್ದರು.
ಸಿಂಧೂರಕ್ಕೆ ಬೇಡಿಕೆ
ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ‘ಆಪರೇಶನ್ ಸಿಂಧೂರ’ ಹಿನ್ನೆಲೆಯಲ್ಲಿ ಈ ಬಾರಿ ‘ಸಿಂಧೂರ’ ತಳಿಯ ಮಾವಿನ ಹಣ್ಣಿಗೆ ವಿಶೇಷ ಬೇಡಿಕೆ ಕಂಡುಬಂತು. ಈ ಹಣ್ಣಿನ ದರ ಕೆಜಿಗೆ ₹80ರಷ್ಟು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.