ಮಂಗಳೂರು: ‘ರಾಜ್ಯ ಸರ್ಕಾರದ ಸೂಚನೆಯಂತೆ ಇದೇ 15ರಂದು ಪಾಲಿಕೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಾನವ ಸರಪಣಿ ರಚಿಸುವ ಮೂಲಕ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಿದ್ದೇವೆ’ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.
ಇಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಅವರು, ‘ಪಾವಂಜೆ ನದಿಯ ಬಳಿಯಿಂದ ನಂತೂರು ಜಂಕ್ಷನ್ ಹಾಗೂ ಕಣ್ಣೂರು ಜಂಕ್ಷನ್ವರೆಗೆ ಅಲ್ಲಲ್ಲಿ ಒಟ್ಟು 23 ಕಿ.ಮೀ ಉದ್ದದ ಮಾನವ ಸರಪಣಿ ರಚಿಸಲಿದ್ದೇವೆ. ಪ್ರತಿ 100ಮೀ ಅಂತರದಲ್ಲಿ ದೇಶದ ಬಾವುಟ ಪ್ರದರ್ಶಿಸಲಿದ್ದೇವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರೇತರ ಸಂಘಟನೆಗಳು ಕೈ ಜೋಡಿಸಲಿವೆ. 10ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಬಗ್ಗೆ ಪಾಲಿಕೆ ಸದಸ್ಯರಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದರು.
‘ಕಾರ್ಯಕ್ರಮಕ್ಕೆ ಅಂದು ಬೆಳಿಗ್ಗೆ 9.30ಕ್ಕೆ ಸರ್ಕೀಟ್ ಹೌಸ್ ಬಳಿ ಚಾಲನೆ ನೀಡಲಾಗುತ್ತದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರು, ಪಾಲಿಕೆ ಸದಸ್ಯರು ಅಧಿಕಾರಿಗಳು ಭಾಗವಹಿಸುವರು. ಸಂವಿಧಾನದ ಪೀಠಿಕೆ ಬೋಧನೆ ಹಾಗೂ ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮಗಳೂ ನಡೆಯಲಿವೆ’ ಎಂದರು.
‘ಪಾಲಿಕೆಯ ಉತ್ತರದ ಗಡಿ (ಸುರತ್ಕಲ್ ಬಳಿ) ಹಾಗೂ ಪೂರ್ವದ ಗಡಿಯಲ್ಲಿ (ಕಣ್ಣೂರು) ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಕಮಾನುಗಳನ್ನು ನಿರ್ಮಿಸಲಾಗುತ್ತದೆ. ಕೆಪಿಟಿ, ನಂತೂರು ಹಗೂ ಪಡೀಲ್ ಜಂಕ್ಷನ್ಗಳನ್ನು ಹಾಗೂ ಪಾಲಿಕೆಯ ಕೇಂದ್ರ ಹಾಗೂ ವಲಯ ಕಚೇರಿಗಳನ್ನು ಅಲಂಕರಿಸಲಾಗುತ್ತದೆ. ಮಾನವ ಸರಪಣಿಯಲ್ಲಿ ಭಾಗವಹಿಸುವವರು ತಮ್ಮ ಫೋಟೊ ತೆಗೆದು ಈ ಕಾರ್ಯಕ್ರಮದ ಪೋರ್ಟಲ್ಗೆ (https://democracydaykarnataka.in ) ಅಪ್ ಲೋಡ್ ಮಾಡಿ, ತಮ್ಮ ಭಾವಚಿತ್ರವಿರುವ ಪ್ರಮಾಣಪತ್ರವನ್ನು ಆನ್ಲೈನ್ ಮೂಲಕವೇ ಪಡೆಯಬಹುದು’ ಎಂದರು.
‘ಈ ಬಾರಿ ದಸರಾ ಉತ್ಸವ ಸಂದರ್ಭದಲ್ಲಿ ವ್ಯಾಪಾರ ಮಳಿಗೆಗಳಿಗೆ ಪಾಲಿಕೆ ವ್ಯಾಪ್ತಿಯ ಜಾಗವನ್ನು ಹರಾಜಿನ ಮೂಲಕ ಹಂಚಿಕೆ ಮಾಡಲಿದ್ದೇವೆ. ದೇವಸ್ಥಾನದ ಆಡಳಿತ ಮಂಡಳಿ ಜೊತೆ ಚರ್ಚಿಸಿ ಈ ಬಗ್ಗೆ ಕ್ರಮವಹಿಸಲಿದ್ದೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸುನೀತಾ, ಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ ಭಾಗವಹಿಸಿದ್ದರು.
10ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಕೆಪಿಟಿ, ನಂತೂರು ಪಡೀಲ್ ಜಂಕ್ಷನ್ಗಳಿಗೆ ಅಲಂಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.