ಬೆಳ್ತಂಗಡಿ: ‘ಕೋವಿಡ್ ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದವರಲ್ಲಿ ದಾದಿಯರ ಪಾತ್ರ ಪ್ರಮುಖವಾದದ್ದು. ವೈದ್ಯರು ಮತ್ತು ರೋಗಿಗಳ ನಡುವೆ ಕೊಂಡಿಯಾಗಿ ಶ್ರಮಿಸುವವರು ದಾದಿಯರು. ಮನೆ ಮಂದಿಯ ರಕ್ಷಣೆಯೊಂದಿಗೆ ತಮ್ಮ ರಕ್ಷಣೆಯನ್ನು ಮಾಡುತ್ತ ರೋಗಿಗಳ ಆರೈಕೆ ಮಾಡುವ ದಾದಿಯರ ರಕ್ಷಣೆಗೆ ನಾನು ಸಿದ್ಧನಿದ್ದೇನೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ವಿಶ್ವ ದಾದಿಯರ ದಿನದ ಅಂಗವಾಗಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 22 ಮಂದಿ ದಾದಿಯರಿಗೆ ತಲಾ ₹ 10 ಸಾವಿರದಂತೆ ಪ್ರೋತ್ಸಾಹಧನ ನೀಡಿ ದಾದಿಯರನ್ನು ಗೌರವಿಸಿ ಅವರು ಮಾತನಾಡಿದರು.
‘ದಾದಿಯರು ಯಾವುದೇ ರೀತಿಯ ಆತಂಕಪಡದೆ, ಕರ್ತವ್ಯವನ್ನು ನಿರ್ವಹಿಸಿ. ಏನಾದರೂ ಕಿರುಕುಳ, ತೊಂದರೆಗಳು ಬಂದಲ್ಲಿ ನನ್ನನ್ನು ಸಂಪರ್ಕಿಸಿ. ನಿಮಗೆ ರಕ್ಷಣೆ ಕೊಡಲು ಸಿದ್ಧ’ ಎಂದು ಎಂದು ಹೇಳಿದರು.
ಶುಶ್ರೂಷಕಿ ಅಧಿಕಾರಿ ಜಾಯ್ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ನಮ್ಮನ್ನು ಗೌರವಿಸಿರುವುದು ಅಭಿನಂದನೀಯ. ಇನ್ನಷ್ಟು ಕೆಲಸ ಮಾಡಲು ಕೊರತೆ ಇರುವ ಸ್ಟಾಫ್ ನರ್ಸ್ಗಳನ್ನು ನೇಮಕ ಮಾಡಿ ಮತ್ತು ‘ಡಿ’ ದರ್ಜೆ ನೌಕರರನ್ನು ನೇಮಿಸಿ ಇನ್ನಷ್ಟು ರೋಗಿಗಳ ಸೇವೆ ಮಾಡಲು ಅವಕಾಶ ಮಾಡಿಕೊಡಿ’ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯನಂದ್ ಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಇದ್ದರು. ಆಪ್ತ ಸಮಾಲೋಚಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.