ADVERTISEMENT

ತ್ಯಾಜ್ಯ ಮೈಮೇಲೆ ಸುರಿದುಕೊಳ್ಳಲು ಮುಂದಾಗಿದ್ದ ಪೌರಕಾರ್ಮಿಕರ ಜತೆ ಸಂಧಾನ ಯತ್ನ

ತ್ಯಾಜ್ಯ ಮೈಮೇಲೆ ಸುರಿದುಕೊಳ್ಳಲು ಮುಂದಾಗಿದ್ದ ಪೌರಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 4:24 IST
Last Updated 18 ಮಾರ್ಚ್ 2023, 4:24 IST
ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಹೊರಗುತ್ತಿಗೆ ಪೌರಕಾರ್ಮಿಕರೊಂದಿಗೆ ಚರ್ಚಿಸಿದರು
ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಹೊರಗುತ್ತಿಗೆ ಪೌರಕಾರ್ಮಿಕರೊಂದಿಗೆ ಚರ್ಚಿಸಿದರು   

ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಹೊರಗುತ್ತಿಗೆ ಪೌರಕಾರ್ಮಿಕರು, ಶಾಸಕರು, ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡದಿದ್ದರೆ ತ್ಯಾಜ್ಯವನ್ನು ಮೈಮೇಲೆ ಸುರಿದುಕೊಳ್ಳುವುದಾಗಿ ಬೆದರಿಕೆ ಹಾಕಿದ ಪರಿಣಾಮ, ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳ ಜತೆ ಸ್ಥಳಕ್ಕೆ ತೆರಳಿ, ಪೌರಕಾರ್ಮಿಕರ ಜತೆ ಚರ್ಚಿಸಿದರು.

ಶುಕ್ರವಾರ ಬೆಳಿಗ್ಗೆ ನಗರದ ಅಳಕೆಯಲ್ಲಿ ಒಳಚರಂಡಿ ನಿರ್ವಹಣೆ ಕಾರ್ಮಿಕರು ಪ್ರತಿಭಟನೆಗೆ ಕುಳಿತು, ತ್ಯಾಜ್ಯ ನೀರನ್ನು ಎದುರಿಟ್ಟು ಮೈಮೇಲೆ ಸುರಿದುಕೊಳ್ಳುವುದಾಗಿ ಬೆದರಿಕೆ ಹಾಕಿದರು. ಮಧ್ಯಾಹ್ನದ ವೇಳೆಗೆ ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ ಅವರ ಜತೆ ಸ್ಥಳಕ್ಕೆ ತೆರಳಿದ ವೇದವ್ಯಾಸ ಕಾಮತ್ ಅವರು ಕಾರ್ಮಿಕರ ಜತೆ ಮಾತುಕತೆ ನಡೆಸಿದರು.

‘ಶಾಸಕರು ನೀಡಿದ ಭರವಸೆ ಹಿನ್ನಲೆಯಲ್ಲಿ, ತ್ಯಾಜ್ಯವನ್ನು ಮೈಮೇಲೆ ಸುರಿದುಕೊಳ್ಳುವುದನ್ನು ನಿಲ್ಲಿಸಿದ್ದೇವೆ. ಇನ್ನು ಎರಡು ದಿನಗಳಲ್ಲಿ ಭರವಸೆ ಈಡೇರದಿದ್ದಲ್ಲಿ ಶಾಸಕರ ಮನೆ ಎದುರು ತ್ಯಾಜ್ಯವನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸುತ್ತೇವೆ’ ಎಂದು ಧರಣಿನಿರತ ಪೌರಕಾರ್ಮಿಕರು ಹೇಳಿದರು.

ADVERTISEMENT

‘ಗುತ್ತಿಗೆ ನಿರ್ವಹಣೆ ಮಾಡುತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನವರು ನಮ್ಮ ಸುರಕ್ಷತೆಗೆ ಒತ್ತುನೀಡುತ್ತಿಲ್ಲ. ಸುರಕ್ಷಾ ಸಾಧನಗಳಿಲ್ಲದೆ ಕೆಲಸ ನಿರ್ವಹಿಸುವಂತೆ ಒತ್ತಡ ಹಾಕುತ್ತಾರೆ. ವೆಟ್‌ವೆಲ್‌ಗಳಲ್ಲಿ ಸೂಕ್ತ ಏಣಿಗಳು ಇಲ್ಲ. ಇದರ ಬಗ್ಗೆ ಧ್ವನಿ ಎತ್ತಿದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ’ ಎಂದು ಆರೋಪಿಸಿದರು.

ವೇದವ್ಯಾಸ ಕಾಮತ್ ಮಾತನಾಡಿ, ‘ರಾಜ್ಯದಾದ್ಯಂತ ಐದು ದಿನಗಳಿಂದ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ ನಡೆಯುತ್ತಿದ್ದು, ಕಾರ್ಮಿಕರು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಸವಲತ್ತು ಸಿಗಬೇಕಾಗಿದೆ. ಕಾರ್ಮಿಕರ ಮುಷ್ಕರದಿಂದ ಜನರು ತೊಂದರೆ ಅನುಭವಿಸುತ್ತಿರುವುದನ್ನು ಮನವರಿಕೆ ಮಾಡಿಕೊಲಾಗಿದೆ. ಅವರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಮಿಕರು ಪ್ರತಿಭಟನೆ ಹಿಂಪಡೆದು ಕಾರ್ಯ ಪ್ರಾರಂಭಿಸಬೇಕು’ ಎಂದರು.

ಪಾಲಿಕೆಯ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕೀಲಾ ಕಾವ,
ಸದಸ್ಯರಾದ ದಿವಾಕರ್, ಟಿ.ಕೆ. ಸುಧೀರ್, ಜಯಶ್ರೀ ಕುಡ್ವ, ಪೌರ ಕಾರ್ಮಿಕರಾದ ಪದ್ಮನಾಭ, ರವೀಂದ್ರ, ನಾಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.