ಮಂಗಳೂರು: ಕೋವಿಡ್ ಹಾಗೂ ಲಾಕ್ಡೌನ್ ನಿರ್ಬಂಧದ ಸಂಕಷ್ಟದಲ್ಲಿ ಪ್ರಾಯೋಜಕರ ಕೊರತೆಯಿಂದ ನಿರ್ವಹಣೆ ಸಮಸ್ಯೆಯಲ್ಲಿದ್ದ ಪಿಲಿಕುಳ ನಿಸರ್ಗಧಾಮದ 1,250 ವನ್ಯಜೀವಿಗಳ ಆಹಾರ ಹಾಗೂ ಆರೋಗ್ಯ ಸೇರಿದಂತೆ ₹ 8.1 ಕೋಟಿ ವೆಚ್ಚವನ್ನು ಮಂಗಳೂರು ತೈಲಾಗಾರ ಎಂಆರ್ಪಿಎಲ್ ಭರಿಸ ಲಿದ್ದು, 2 ವರ್ಷಗಳ ಅವಧಿಗೆ ದತ್ತು ಪಡೆದಿದೆ.
‘ದತ್ತು ಪ್ರಾಯೋಜನೆಯಲ್ಲಿ ಪ್ರಾಣಿಗಳ ಆಹಾರ, ಪಶುವೈದ್ಯ ಚಿಕಿತ್ಸೆ, ಪ್ರಯೋಗಾಲಯ, ಎಕ್ಸ್ರೇ ಸೌಲಭ್ಯ, ಕ್ವಾರಂಟೈನ್, ಔಷಧ ಮತ್ತಿತರ ಸೌಲಭ್ಯ ಒಳಗೊಂಡಿದೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಒಎನ್ಜಿಸಿ–ಎಂಆರ್ಪಿಎಲ್ ಸಾಮಾಜಿಕ ಜವಾಬ್ದಾರಿಯುತ ಸಂಸ್ಥೆಯಾಗಿದ್ದು ಈ ಕಾರ್ಯ ಮಾಡುತ್ತಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಹೇಳಿದರು.
‘ಇತ್ತೀಚಿನವರೆಗೂ ಸೆಲೆಬ್ರಿಟಿಗಳು, ಇತರ ದಾನಿಗಳು ನಿಸರ್ಗಧಾಮದ ವನ್ಯಜೀವಿಗಳನ್ನು ದತ್ತು ಪಡೆಯುತ್ತಿದ್ದರು. ಆದರೆ, ಕೋವಿಡ್ ಸಂಕಷ್ಟದಿಂದಾಗಿ ಪ್ರಾಯೋ ಜಕರ ಕೊರತೆಯಿಂದ ಪ್ರಾಣಿಗಳು ಸಮಸ್ಯೆಯಲ್ಲಿದ್ದವು. ಈ ಸಂದರ್ಭದಲ್ಲಿ ಎಂಆರ್ಪಿಎಲ್ ಕೈಜೋಡಿಸಿದೆ’ ಎಂದರು.
ಈ ಮೊದಲು ಕೂಡ ಎಂಆರ್ ಪಿಎಲ್ ಪಿಲಿಕುಳದಲ್ಲಿ ಸಾಮಾಜಿಕ ಬದ್ಧತೆ ದಾಖಲಿಸಿದೆ. ವಾಮಂಜೂರಿನಲ್ಲಿರುವ ಪಿಲಿಕುಳದ 50 ಎಕರೆ ಪ್ರದೇಶದಲ್ಲಿ ₹ 70 ಲಕ್ಷ ವೆಚ್ಚದಲ್ಲಿ ಅಮೂಲ್ಯ ವೃಕ್ಷಗಳ ಸಸಿನಾಟಿ, ಹಸಿರೀಕರಣ ಮಾಡಿದೆ. ಇದೇ ರೀತಿ ತಣ್ಣೀರುಬಾವಿಯ 25 ಎಕರೆ ಪ್ರದೇಶದಲ್ಲಿ ₹1.45 ಅರಣ್ಯೀಕರಣಕ್ಕೆ ರಾಜ್ಯ ಅರಣ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಎಂಆರ್ಪಿಎಲ್ ಕಾರ್ಪೊರೇಟ್ ಕಮ್ಯುನಿಕೇಷನ್ ವಿಭಾಗದ ಎಂಡಿ ಡಾ. ರುಡಾಲ್ಫ್ ನೊರೊನ್ಹಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.