ಮೂಲ್ಕಿ: ಬುಧವಾರ ಮನೆಯಿಂದ ಆಟೊದಲ್ಲಿ ತೆರಳಿದ್ದ ಮೂಲ್ಕಿ ಕೊಲ್ನಾಡು ಬಳಿಯ ನಿವಾಸಿ ಮಹಮ್ಮದ್ ಷರೀಫ್ (52) ನಾಪತ್ತೆಯಾಗಿದ್ದು, ಅವರು ಗುರುವಾರ ಸಂಜೆ ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿನ ಹಲವು ಸಂಶಯಗಳು ವ್ಯಕ್ತವಾಗಿದೆ.
ಮಹಮ್ಮದ್ ಷರೀಫ್ ಅವರು ದಿನಂಪ್ರತಿ ಕೊಟ್ಟಾರದ ಆಟೊ ನಿಲ್ದಾಣದಲ್ಲಿ ಬಾಡಿಗೆ ನಡೆಸುತ್ತಿದ್ದರು. ಬುಧವಾರ ರಾತ್ರಿಯಾದರೂ ಬಾರದೆ ಇದ್ದುದರಿಂದ ಗುರುವಾರ ಬೆಳಿಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಸಾಮಾಜಿಕ ಮಾಧ್ಯಮದಲ್ಲಿ ನಾಪತ್ತೆಯ ಬಗ್ಗೆ ತಿಳಿಸಲಾಗಿತ್ತು.
ಮೂಲ್ಕಿ ಪೊಲೀಸರಿಗೆ ಲಭಿಸಿದ ಮಾಹಿತಿ ಆಧರಿಸಿ ಕುಂಜತ್ತೂರಿಗೆ ತೆರಳಿದಾಗ ಅಲ್ಲಿ ರಿಕ್ಷಾ ಪತ್ತೆಯಾಗಿದ್ದು, ಹತ್ತಿರದ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಬಾಡಿಗೆ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿರುವ ಸಾಧ್ಯತೆ ಇದೆ. ಕುಂಜತ್ತೂರು ಪ್ರದೇಶವು ಮಾದಕ ವ್ಯಸನಿಗಳ ತಾಣವಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೊಹಮ್ಮದ್ ಷರೀಫ್ ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.