ನೆಲ್ಯಾಡಿ (ಉಪ್ಪಿನಂಗಡಿ): ನೆಲ್ಯಾಡಿ ಅಸುಪಾಸಿನ 15 ಗ್ರಾಮಗಳನ್ನು ಸೇರಿಸಿ ನೆಲ್ಯಾಡಿಯಲ್ಲಿ ಪೂರ್ಣ ಪ್ರಮಾಣದ ಹೊಸ ಪೊಲೀಸ್ ಠಾಣೆ ರಚನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೌಕ್ರಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
ಕೆಲ ದಿನಗಳ ಹಿಂದೆ ಗೃಹ ಸಚಿವ ಜಿ.ಪರಮೇಶ್ವರ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾಗ ಕಡಬ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್ ಅವರು ನೆಲ್ಯಾಡಿಯಲ್ಲಿ ಈಗಿರುವ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗೃಹ ಸಚಿವ ಸೂಚನೆ ನೀಡಿದ್ದರು. ಉಪ್ಪಿನಂಗಡಿ ಪೊಲೀಸರು ಕೌಕ್ರಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
15 ಗ್ರಾಮಗಳ ವ್ಯಾಪ್ತಿ: ನೆಲ್ಯಾಡಿ ಹೊರ ಠಾಣೆಯು ನೆಲ್ಯಾಡಿ, ಕೊಣಾಲು, ಕೌಕ್ರಾಡಿ, ಇಚ್ಲಂಪಾಡಿ, ಕೊಣಾಜೆ, ಶಿರಾಡಿ ಹಾಗೂ ಸಿರಿಬಾಗಿಲು ಗ್ರಾಮಗಳನ್ನು ಒಳಗೊಂಡಿದೆ. ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಠಾಣೆಯನ್ನಾಗಿ ಪರಿವರ್ತಿಸಲು ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಆಲಂತಾಯ, ಗೋಳಿತ್ತೊಟ್ಟು, ಧರ್ಮಸ್ಥಳ ಠಾಣೆ ವ್ಯಾಪ್ತಿಯ ರೆಖ್ಯ, ಶಿಬಾಜೆ, ಶಿಶಿಲ, ಕೊಕ್ಕಡ, ಹತ್ಯಡ್ಕ, ಕಡಬ ಠಾಣಾ ವ್ಯಾಪ್ತಿಯ ಬಲ್ಯ ಗ್ರಾಮ ಸೇರಿ 15 ಗ್ರಾಮಗಳ ವ್ಯಾಪ್ತಿ ಸೇರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈಗಿರುವ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಗೆ ರಾಷ್ಟ್ರೀಯ ಹೆದ್ದಾರಿಯೂ ಸೇರುವುದರಿಂದ ಅಪಘಾತ, ಕಳವು ಪ್ರಕರಣ, ಆನೆ ದಾಳಿ ಪ್ರಕರಣ, ಉಪ್ಪಿನಂಗಡಿ ಠಾಣೆಗೆ ಗ್ರಾಮಗಳಿಂದ 18 ಕಿ.ಮೀ.ಗಿಂತ ಹೆಚ್ಚಿನ ದೂರ, ಈ ಹಿಂದೆ ಸಿರಿಬಾಗಿಲು ಗ್ರಾಮದಲ್ಲಿ ನಡೆದಿರುವ ನಕ್ಸಲ್ ಚಟುವಟಿಕೆ, ಕಾಡು ಪ್ರದೇಶಗಳಿಂದ ಆವರಿಸಿರುವುದೂ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳಿಂದಾಗಿ ನೆಲ್ಯಾಡಿಗೆ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಅಗತ್ಯವಾಗಿದೆ ಎಂಬುದನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸುವಂತೆಯೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ನೆಲ್ಯಾಡಿ ಭಾಗದಲ್ಲಿ ಶೇ 41ರಷ್ಟು ಕ್ರಿಮಿನಲ್ ಪ್ರಕರಣ: ಉಪ್ಪಿನಂಗಡಿ ಠಾಣೆಯ ಪಿಎಸ್ಐ (ತನಿಖೆ-1) ಗುರುನಾಥ್ ಹಾದಿಮನಿ ಮಾತನಾಡಿ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಗೆ 22 ಗ್ರಾಮಗಳು ಬರುತ್ತಿದ್ದು, ಇದರಲ್ಲಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ 7 ಗ್ರಾಮಗಳೂ ಸೇರಿವೆ. ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗುವ ಕ್ರಿಮಿನಲ್ ಪ್ರಕರಣಗಳಲ್ಲಿ ಶೇ 41 ನೆಲ್ಯಾಡಿ ಹೊರಠಾಣೆ ವ್ಯಾಪ್ತಿಯಲ್ಲಿಯೇ ನಡೆದಿರುವಂಥವು. ಈ ಭಾಗದ ಗ್ರಾಮಸ್ಥರು ಉಪ್ಪಿನಂಗಡಿ ಠಾಣೆಗೆ ಬರಬೇಕಾದರೆ 18 ಕಿ.ಮೀ. ಪ್ರಯಾಣ ಮಾಡಬೇಕಾಗಿದೆ ಎಂದರು.
ಹೊಸ ಠಾಣೆಯಾಗಲು ಠಾಣಾ ವ್ಯಾಪ್ತಿಯಲ್ಲಿ ಇಂತಿಷ್ಟು ಕ್ರಿಮಿನಲ್ ಪ್ರಕರಣ, ಕನಿಷ್ಠ 50 ಸಾವಿರ ಜನಸಂಖ್ಯೆ ಇರಬೇಕಾಗಿದೆ. ಈ ವಿಚಾರಗಳನ್ನು ಉಲ್ಲೇಖಿಸಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಬಂದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸರ್ಕರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಗುರುನಾಥ್ ಹಾದಿಮನಿ ಹೇಳಿದರು.
ಪ್ರಮುಖರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ ನೆಲ್ಯಾಡಿ, ಉಷಾ ಅಂಚನ್ ನೆಲ್ಯಾಡಿ, ಆಶಾಲಕ್ಷ್ಮಣ್ ಗುಂಡ್ಯ, ಅಭಿಲಾಷ್ ಪಿ.ಕೆ., ದೇವಿಕಾ ಮಾತನಾಡಿದರು.
ಕಾರ್ತಿಖೇಯನ್, ಎಂ.ಕೆ.ಪೌಲೋಸ್, ಕೆ.ಎಂ.ಹನೀಫ್, ರವಿಪ್ರಸಾದ್, ಸತೀಶ್ ದುರ್ಗಾಶ್ರೀ, ಜಾರ್ಜ್ಕುಟ್ಟಿ, ಲೋಕೇಶ್ ಬಾಣಜಾಲು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.