ADVERTISEMENT

ಈಡೇರಿದ ಕರಾವಳಿ ಜನರ ಬೇಡಿಕೆ

ಮಂಗಳೂರು–ಯಶವಂತಪುರ ರಾತ್ರಿ ರೈಲು ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 13:20 IST
Last Updated 20 ಫೆಬ್ರುವರಿ 2019, 13:20 IST

ಮಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಯಶವಂತಪುರ–ಮಂಗಳೂರು ಸೆಂಟ್ರಲ್ (ರೈ.ಸಂ. 16585/16586) ರೈಲು ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಸಂಸದ ನಳಿನ್‌ಕುಮಾರ್ ಕಟೀಲ್‌ ಅವರು ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಉದ್ಘಾಟನೆ ಆಗಲಿರುವ ರೈಲು (ರೈ.ಸಂ. 06586) ಬುಧವಾರ ಕಬಕಪುತ್ತೂರವರೆಗೆ ಸಂಚರಿಸಲಿದ್ದು, ನಂತರ ನಿಗದಿತ ವೇಳಾಪಟ್ಟಿಯಂತೆ ಓಡಾಟ ಮುಂದುವರಿಸಲಿದೆ.

ಯಶವಂತಪುರ–ಮಂಗಳೂರು ಸೆಂಟ್ರಲ್‌ (ರೈ.ಸಂ. 16585) ರೈಲು ಸಂಚಾರ ಇದೇ 22 ರಿಂದ ಹಾಗೂ ಮಂಗಳೂರು ಸೆಂಟ್ರಲ್‌–ಯಶವಂತಪುರ (ರೈ.ಸಂ.16586) ರೈಲು ಸಂಚಾರ ಇದೇ 24 ರಿಂದ ಆರಂಭವಾಗಲಿದೆ. ಈ ರೈಲು ವಾರದಲ್ಲಿ ಮೂರು ದಿನ ಶ್ರವಣಬೆಳಗೂಳ, ಹಾಸನ ಮಾರ್ಗವಾಗಿ ಸಂಚರಿಸಲಿದೆ.

ADVERTISEMENT

ಮಂಗಳೂರು ಸೆಂಟ್ರಲ್–ಯಶವಂತಪುರ (ರೈ.ಸಂ. 16586) ರೈಲು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಜೆ 7 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 5ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ. ಮಾರ್ಗಮಧ್ಯೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೂಳ, ಯಡಿಯೂರು, ನೆಲಮಂಗಲ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಯಶವಂತಪುರ–ಮಂಗಳೂರು ಸೆಂಟ್ರಲ್ (ರೈ.ಸಂ. 16585) ರೈಲು ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಸಂಜೆ 4.30ಕ್ಕೆ ಯಶವಂಪುರ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಬರಲಿದೆ.

2 ಟಯರ್ ಎಸಿಯ ಒಂದು, 3 ಟಯರ್ ಎಸಿಯ 1, ಸೆಕೆಂಡ್‌ ಕ್ಲಾಸ್ ಸ್ಪೀಪರ್‌ 7, ಸಾಮಾನ್ಯ 3, ಲಗೇಜ್‌ ಹಾಗೂ ಅಂಗವಿಕಲ ಸ್ನೇಹಿ ಒಂದು ಬೋಗಿಗಳು ಇರಲಿವೆ.

ಬಹುದಿನಗಳ ಬೇಡಿಕೆಯಾಗಿದ್ದ ರಾತ್ರಿ ರೈಲು ಸಂಚಾರಕ್ಕೆ ಇದೀಗ ಹಸಿರು ನಿಶಾನೆ ಸಿಕ್ಕಿದ್ದು, ಕರಾವಳಿ ಜನರು ಬೇಡಿಕೆ ಈಡೇರಿದಂತಾಗಿದೆ. ಜತೆಗೆ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಜನರಿಗೆ ಮತ್ತಷ್ಟು ಅನುಕೂಲ ಕಲ್ಪಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.