ಮಂಗಳೂರು: ನಗರದ ನಂತೂರು ಪದವು ಬಳಿಯ ಎನ್ಎಸ್ಎಎಂ ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗೆ (17 ವರ್ಷ) ಸಮೀಪದ ಪದವು ಪಿ.ಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಚಾಕುವಿನಿಂದ ಇರಿದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಗುರುವಾರ ಸಂಜೆ 4-30ರ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳು ವಿದ್ಯಾರ್ಥಿಯನ್ನು ಸಹಪಾಠಿಗಳು ಎಸ್ಸಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಪದುವಾ ಪಿ.ಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಅವರ ಪೋಷಕರ ಜೊತೆಗೆಠಾಣೆಗೆ ಕರೆಸಿಕೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ. ಕಾನೂನು ಸಂಘರ್ಷಕ್ಕೊಳಾಗದ ಬಾಲಕರ ವಿರುದ್ಧ ಬಾಲ ನ್ಯಾಯ ಮಂಡಳಿ ರವರಿಗೆ ಸೂಕ್ತ ವರದಿಯನ್ನು ಸಲ್ಲಿಸಿದ್ದಾರೆ.
‘ಎನ್ಎಸ್ಎಎಂ ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯ ಗೆಳೆಯನೊಬ್ಬ ಪದುವಾ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆತನಿಗೆ ಪದುವಾ ಕಾಲೇಜಿನ ಮೂವರು ವಿದ್ಯಾರ್ಥಿಗಳು ಬೆದರಿಕೆ ಒಡ್ಡಿದ್ದರು. ಎನ್ಎಸ್ಎಎಂ ಪಿ.ಯು ಕಾಲೇಜಿನ ವಿದ್ಯಾರ್ಥಿಯು ಗಳೆಯರ ಜೊತೆ ಪದುವಾ ಕಾಲೇಜಿಗೆ ತೆರಳಿ, ಬೆದರಿಕೆ ಒಡ್ಡಿದವರಿಗೆ ಬುದ್ಧಿವಾದ ಹೇಳಿದ್ದ. ಈ ವಿಚಾರವಾಗಿ ಪದುವಾ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಿಟ್ಟಾಗಿದ್ದರು.’
‘ಎನ್ಎಸ್ಎಎಂ ವಿದ್ಯಾರ್ಥಿಯು ಗುರುವಾರ ಸಂಜೆ ನಂತೂರು ಜಂಕ್ಷನ್ ಬಳಿಗೆ ನಡೆದು ಬರುವಾಗ ಪದುವಾ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಆತನನ್ನು ‘ಮಾತನಾಡಲಿಕ್ಕಿದೆ’ ಎಂದು ಕರೆದಿದ್ದರು. ಆತನನ್ನು ನಂತೂರಿನ ಬಬ್ಬುಸ್ವಾಮಿ ದೈವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು ‘ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಹೇಳಿ ಚೂರಿಯಿಂದ ಇರಿದಿದ್ದರು. ಇರಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ವಿದ್ಯಾರ್ಥಿಯ ಹೊಟ್ಟೆಯ ಎಡಭಾಗ, ಎಡಗೈ, ಮೊಣಕೈ ಹಾಗೂ ಬೆನ್ನಿನ ಮೇಲ್ಭಾಗದಲ್ಲಿ ಗಾಯಗಳಾಗಿವೆ. ತಕ್ಷಣವೇ ಗಾಯಾಳು ವಿದ್ಯಾರ್ಥಿಯನ್ನು ಸಹಪಾಠಿಗಳು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನೂನು ಸಂಘರ್ಷಕ್ಕೆ ಒಳಗಾದ ವಿದ್ಯಾರ್ಥಿಗಳಲ್ಲಿ ಒಬ್ಬಾತ ಉಳ್ಳಾಲ ನಿವಾಸಿ. ಇನ್ನೊಬ್ಬ ಪಚ್ಚನಾಡಿ ನಿವಾಸಿ ಎಮದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.