ADVERTISEMENT

ಮಂಗಳೂರು | ಕಾರು ಮಾರಾಟದ ನೆಪದಲ್ಲಿ ವಂಚನೆ: ಬಂಧಿತ ಆರೋಪಿ ವಿರುದ್ಧ 3ನೇ ದೂರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 5:50 IST
Last Updated 3 ಜುಲೈ 2025, 5:50 IST
   

ಮಂಗಳೂರು: ಒಎಲ್‌ಎಕ್ಸ್ ಆ್ಯಪ್‌ ಬಳಸಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿ ರವಿಚಂದ್ರ ಎಂ.ರೇವಣಕರ (29) ವಿರುದ್ಧ ಕಮಿಷನರೇಟ್‌ನ ವ್ಯಾಪ್ತಿಯಲ್ಲಿ ಮೂರನೇ ದೂರು ದಾಖಲಾಗಿದೆ.

ಒಎಲ್‌ಎಕ್ಸ್‌ ನಲ್ಲಿ ಕಾರು ಮಾರಾಟದ ಬಗ್ಗೆ ಜಾಹೀರಾತು ನೀಡಿ ಇಲ್ಲಿನ ನಿವಾಸಿಯೊಬ್ಬರಿಂದ ₹ 2.50 ಲಕ್ಷಪಡೆದು ವಂಚಿಸಿದ್ದ ಬಗ್ಗೆ ರವಿಚಂದ್ರ ವಿರುದ್ಧ ಇಲ್ಲಿನ ಸೆನ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಇಲ್ಲಿನ ಪೊಲೀಸರು ಹೊಸಪೇಟೆಯಲ್ಲಿ ಬಂಧಿಸಿ ಇಲ್ಲಿನ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.

‘ಮಾರುತಿ ಸುಝುಕಿ ಕಂಪನಿಯ ಎರ್ಟಿಗಾ ಜೆಡ್‌ಡಿಐ ಕಾರು ಮಾರಾಟದ ಬಗ್ಗೆ ಆರೋಪಿಯು ಆನ್ಲೈನ್ ಮಾರಾಟ ವೇದಿಕೆ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದ. ಅದರಲ್ಲಿ ನಮೂದಿಸಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಮಾತನಾಡಿದ ವ್ಯಕ್ತಿ ತನ್ನನ್ನು ವಕೀಲ ರವಿಚಂದ್ರ ಮಂಜುನಾಥ್ ಎಂದು ಪರಿಚಯಿಸಿಕೊಂಡಿದ್ದ. ₹ 3.50 ಲಕ್ಷಕ್ಕೆ ಕಾರನ್ನು ಮಾರುವುದಾಗಿ ತಿಳಿಸಿ ಮುಂಗಡವಾಗಿ ₹ 20 ಸಾವಿರವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ₹ 1 ಲಕ್ಷ ಮುಂಗಡ ನೀಡಬೇಕು, ಕಾರು ಒಯ್ಯುವಾಗ ₹ 1.5 ಲಕ್ಷ ನೀಡಬೇಕು. ₹1 ಲಕ್ಷವನ್ನು ದಾಖಲೆ ವರ್ಗಾವಣೆಯಾದ ಬಳಿಕ ನೀಡಬೇಕು ಎಂದು ತಿಳಿಸಿದ್ದ. ನಾನು ಮತ್ತೆ ಮಾರ್ಚ್ 24ರಂದು ₹ 30 ಸಾವಿರ ಹಾಗೂ ಮಾರ್ಚ್‌ 24ರಂದು ₹ 50 ಸಾವಿರ ನೀಡಿದ್ದೆ. ನಂತರ ಕಾರು ನೀಡುವಂತೆ ಕೇಳಿದಾಗ ನಾನಾ ಕಾರಣ ಹೇಳಿ ತಪ್ಪಿಸಿಕೊಂಡಿದ್ದ. ಹಣವನ್ನು ಮರಳಿಸುವಂತೆ ಕೇಳಿದಾಗ ₹ 20 ಸಾವಿರ ಮಾತ್ರ ಹಿಂತಿರುಗಿಸಿದ್ದ. ಆರೋಪಿಯು ನಮಗೆ ₹ 80 ಸಾವಿರ ವಂಚಿಸಿದ್ದಾನೆ ಎಂದು ಸಂತ್ರಸ್ತ ವ್ಯಕ್ತಿ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಆರೋಪಿ ರವಿಚಂದ್ರ ರೇವಣಕರ್ ಕಾರು ಮಾರಾಟದ ನೆಪದಲ್ಲಿ ₹ 3.20 ಲಕ್ಷ ಪಡೆದು ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿಯೊಬ್ಬರು ಬರ್ಕೆ ಠಾಣೆಗೆ ಮಂಗಳವಾರ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.