ಮಂಗಳೂರು: ಆನ್ಲೈನ್ ಭಾಷಣ ಸ್ಪರ್ಧೆ ಏರ್ಪಡಿಸಿ ಕನ್ನಡಿಗರ ವಾಗ್ಮಯಕ್ಕೆ ಸಾಣೆ ಹಿಡಿದಿದ್ದ ನಗರದ ಬೈಕಾಡಿ ಪ್ರತಿಷ್ಠಾನ ಇದೀಗ ಆನ್ಲೈನ್ ಕಥಾ ಸ್ಪರ್ಧೆ ಏರ್ಪಡಿಸಿದೆ. ‘ಕಥಾನಕ–2022’ ಎಂಬ ಹೆಸರಿನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ 3ರಿಂದ 5, 5ರಿಂದ 9, 9ರಿಂದ 13 ವರ್ಷದವರ ವಿಭಾಗಗಳು ಇವೆ ಎಂದು ಪ್ರತಿಷ್ಠಾನದ ಭರತ್ರಾಜ್ ಬೈಕಾಡಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದ್ದು ಮೊದಲ ಸುತ್ತು ಈಗಾಗಲೇ ಆರಂಭಗೊಂಡಿದ್ದು ಈ ತಿಂಗಳ 15ರ ವರೆಗೆ ಇರುತ್ತದೆ. ಅದರಲ್ಲಿ ಆಯ್ಕೆಯಾದವರು ಅಂತಿಮ ಸುತ್ತಿನಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜಗತ್ತಿನ ಯಾವುದೇ ಮೂಲೆಯಿಂದ ವಿಡಿಯೊ ರೆಕಾರ್ಡಿಂಗ್ ಮಾಡಿ ಕಥೆ ಕಳುಹಿಸಬಹುದು. 4 ನಿಮಿಷ ಮೀರದ ವಿಡಿಯೊವನ್ನು 9886507605ಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ಅಗತ್ಯವಿದ್ದಾಗ ವಯಸ್ಸು ದೃಢೀಕರಿಸುವ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುವುದು. ಮೊದಲ ಬಹುಮಾನ ₹ 2000, ಎರಡನೇ ಬಹುಮಾನ ₹ 1000 ಮತ್ತು ಮೂರನೇ ಬಹುಮಾನ ₹ 500 ಇರುತ್ತದೆ. ಇ–ಸರ್ಟಿಫಿಕೆಟ್ ಕೂಡ ನೀಡಲಾಗುವುದು ಎಂದು ಅವರು ವಿವರಿಸಿದರು.
ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಹಾಗೂ ಖಜಾಂಚಿ ಅಕ್ಷತಾ ಇದ್ದರು.
ಸಂಧ್ಯಾ, ಶ್ರೀದೇವಿ, ಆದಿತ್ಯಗೆ ಪ್ರಶಸ್ತಿ
ಬೈಕಾಡಿ ಪ್ರತಿಷ್ಠಾನ ಆಯೋಜಿಸಿದ್ದ ‘ವಾಗ್ಮಿ’ ಭಾಷಣ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್ನ ಸಂಧ್ಯಾ ಪೈ, ಪುತ್ತೂರಿನ ಶ್ರೀದೇವಿ ಕೆ ಮತ್ತು ಮಂಗಳೂರಿನ ಆದಿತ್ಯ ಡಿ ಕ್ರಮವಾಗಿ ಸಾರ್ವಜನಿಕ, ಯುವ ಮತ್ತು ತರುಣ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ ಎಂದು ಭರತ್ರಾಜ್ ತಿಳಿಸಿದರು.
ಸಾರ್ವಜನಿಕ ವಿಭಾಗದಲ್ಲಿ ಕುಂದಾಪುರದ ಸುಮಾ ಸಂಗ್ರಾಮ್ ಮತ್ತು ತೊಕ್ಕೊಟ್ಟಿನ ತ್ರಿವೇಣಿ ಕಿರಣ್ ದ್ವಿತೀಯ ಬಹುಮಾನ ಹಂಚಿಕೊಂಡಿದ್ದು ಮಂಗಳೂರಿನ ಸ್ಮಿತಾ ಬಿ.ರಾವ್ ತೃತೀಯ ಸ್ಥಾನ ಗಳಿಸಿದ್ದಾರೆ. ಯುವ ವಿಭಾಗದಲ್ಲಿ ಮಂಗಳೂರಿನ ಅನನ್ಯ ಜೀವನ್ ಉಳ್ಳಾಲ್ ದ್ವಿತೀಯ, ಬೆಳ್ತಂಗಡಿಯ ಶಾಹಿದ್ ಅಫ್ರಿದಿ ಮತ್ತು ಕುಂದಾಪುರದ ಆದರ್ಶ್ ಕೆಲ ಮೂರನೇ ಬಹುಮಾನ ಗಳಿಸಿದ್ದಾರೆ. ತರುಣ ವಿಭಾಗದ ದ್ವಿತೀಯ ಬಹುಮಾನ ಮಂಗಳೂರಿನ ಪ್ರಾರ್ಥನಾ ಶೆಟ್ಟಿ ಗಳಿಸಿದ್ದು ಸುರತ್ಕಲ್ನ ಹಿತಾ ಉಮೇಶ್ ಮೂರನೇ ಸ್ಥಾನ ಗೆದ್ದಿದ್ದಾರೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.