ADVERTISEMENT

ವರದಿ ಅನುಷ್ಠಾನಕ್ಕೆ ಗ್ರಾಮಸ್ಥರ ವಿರೋಧ

ಬಲ್ಯ ಗ್ರಾಮವನ್ನು ಕೈಬಿಡಲು ಗ್ರಾಮಸ್ಥರ ಆಗ್ರಹ, ವಾಹನ ಜಾಥಾ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 1:50 IST
Last Updated 19 ನವೆಂಬರ್ 2020, 1:50 IST
ಕಸ್ತೂರಿರಂಗನ್ ವರದಿ ಅನುಷ್ಠಾನದ ವೇಳೆ ಬಲ್ಯ ಗ್ರಾಮವನ್ನು ಕೈಬಿಡುವಂತೆ ಆಗ್ರಹಿಸಿ ಕುಟ್ರುಪ್ಪಾಡಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.
ಕಸ್ತೂರಿರಂಗನ್ ವರದಿ ಅನುಷ್ಠಾನದ ವೇಳೆ ಬಲ್ಯ ಗ್ರಾಮವನ್ನು ಕೈಬಿಡುವಂತೆ ಆಗ್ರಹಿಸಿ ಕುಟ್ರುಪ್ಪಾಡಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.   

ಕಡಬ(ಉಪ್ಪಿನಂಗಡಿ): ಕಸ್ತೂರಿ ರಂಗನ್ ವರದಿ ಪ್ರಕಾರ ಪರಿಸರ ಸೂಕ್ಷ್ಮ ವಲಯ ಎಂಬ ಯೋಜನೆಯಿಂದ ಬಲ್ಯ ಗ್ರಾಮವನ್ನು ಕೈಬಿಡಬೇಕೆಂದು ಆಗ್ರಹಿಸಿ ಕುಟ್ರುಪ್ಪಾಡಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಮಲೆನಾಡು ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ವೇದಿಕೆಯ ಸಂಚಾಲಕ ಧನಂಜಯ ಗೌಡ ಕೊಡಂಗೆ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಯ್ಯ ಗೌಡ ಪನ್ಯಾಡಿ ಮಾತನಾಡಿದರು.

ಕಸ್ತೂರಿರಂಗನ್ ವರದಿಯ ಪ್ರಕಾರ ಜಿಲ್ಲೆಯ ಸುಳ್ಯ, ಕಡಬ, ಬೆಳ್ತಂಗಡಿ, ತಾಲ್ಲೂಕುಗಳ 46 ಗ್ರಾಮಗಳು ಪಶ್ಚಿಮಘಟ್ಟ ಅತಿ ಸೂಕ್ಷ್ಮ ಪರಿಸರ ಪ್ರದೇಶವಾಗಿವೆ. ಈ ಭಾಗದ ಜನರು ತಲೆತಲಾಂತರದಿಂದ ತಮ್ಮ ಜೀವನಾಡಿಯಾದ ಕೃಷಿಯನ್ನು ಕುಲಕಸುಬನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯೋಜನೆ ಜಾರಿಯಾದರೆ ರೈತರ ಜೀವನ ಬೀದಿ ಪಾಲಾಗಲಿದೆ. ಆದಕಾರಣ ಈ ವರದಿ ಅನುಷ್ಠಾನದ ವೇಳೆ ಬಲ್ಯ ಗ್ರಾಮವನ್ನು ಕೈಬಿಡಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಭಾವ್ಯ ಸಂತ್ರಸ್ತ ಗ್ರಾಮಗಳಲ್ಲಿ ಹೋರಾಟ ಆಯೋಜಿಸಿ ಕಡಬದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

ಮಲೆನಾಡು ಹಿತರಕ್ಷಣಾ ವೇದಿಕೆಯ ಸತೀಶ್ಚಂದ್ರ ಶೆಟ್ಟಿ, ಕೃಷ್ಣಪ್ಪ ದೇವಾಡಿಗ, ತನಿಯ ಸಂಪಡ್ಕ, ಶಿಜೋ ವರ್ಗೀಸ್, ಶೇಖರ ಗೌಡ ದೇರಾಜೆ, ಸುಧೀರ್ ದೇವಾಡಿಗ, ಚಂದ್ರಶೇಖರ ಮರ್ಧಾಳ, ಉಮೇಶ್ ಬಂಗೇರ, ಭಾಸ್ಕರ ಪೂಜಾರಿ, ಅಚ್ಚುತ ಗೌಡ, ಟಿ.ಕೆ. ಕುರಿಯನ್, ದೇವರಾಜ್ ಬಾರೆತ್ತಡಿ, ಸುಬ್ರಹ್ಮಣ್ಯ ಪ್ರಸಾದ್, ಮೋಹನ್ ಗೌಡ, ಚಂದ್ರಹಾಸ ಸಾಲಿಯಾನ್, ಮಹಮ್ಮದಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.