ADVERTISEMENT

ಅಂಗಾಂಗ ದಾನ ಅಭಿಯಾನಕ್ಕೆ ಚಾಲನೆ ಆ.1ಕ್ಕೆ: ಡಿಎಚ್‌ಒ

ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿದವರಿಗೆ ಸನ್ಮಾನ: ಡಿಎಚ್‌ಒ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:23 IST
Last Updated 31 ಜುಲೈ 2025, 7:23 IST
ಡಾ.ಎಚ್‌.ಆರ್‌.ತಿಮ್ಮಯ್ಯ
ಡಾ.ಎಚ್‌.ಆರ್‌.ತಿಮ್ಮಯ್ಯ   

ಮಂಗಳೂರು: ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ, ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(ಸೋಟೊ) ವತಿಯಿಂದ 15ನೇ ಭಾರತೀಯ ಅಂಗಾಂಗ ದಾನ
ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಅಂಗಾಂಗ ದಾನ- ಜೀವನ ಸಂಜೀವಿನಿ ಅಭಿಯಾನವು ಆಗಸ್ಟ್‌ 1ರಂದು ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಯಲಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭಾಗವಹಿಸುವರು. ದ.ಕ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದರು.

ಜುಲೈ 30ರವರೆಗೆ ಅಂಗಾಂಗ ದಾನ ಮಾಡಲು ರಾಜ್ಯದಲ್ಲಿ 43,221 ಮಂದಿ ನೋಂದಣಿ ಮಾಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ 11,186 ಮಂದಿ ನೋಂದಣಿ ಮಾಡಿದ್ದು, ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ, ದಕ್ಷಿಣ ಕನ್ನಡ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದರು. 

ADVERTISEMENT

ವೆನ್ಲಾಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಕಾಶ್‌, ಲೇಡಿಗೋಶನ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್‌, ಆರ್‌ಸಿಎಚ್‌ ಡಾ.ರಾಜೇಶ್‌, ಜಿಲ್ಲಾ ಸಾಂಕ್ರಾಮಿಕ ರೋಗ ನಿರ್ವಾಹಕಗಳ ಅಧಿಕಾರಿ ಡಾ.ಜೆಸಿಂತಾ, ಕುಷ್ಠರೋಗ ನಿವಾರಣಾ ಅಧಿಕಾರಿ ಡಾ.ಸುದರ್ಶನ್‌, ಜೀವನ ಸಾರ್ಥಕ ಮಂಗಳೂರು ವಲಯದ ಸಂಯೋಜಕಿ ಪದ್ಮಾ ಉಪಸ್ಥಿತರಿದ್ದರು.

ನೋಂದಾಯಿತ ಆಸ್ಪತ್ರೆ

82 ಅಂಗಾಂಗ ದಾನ ಅಭಿಯಾನದ ಅಂಗವಾಗಿ ಸರ್ಕಾರದ ವತಿಯಿಂದ ಉಚಿತ ಏಕಬಳಕೆಯ ಡಯಾಲಿಸಿಸ್ ಕಾರ್ಯಕ್ರಮ ಮಿದುಳು ನಿಷ್ಕ್ರಿಯ ಸಾವು ಸಂದರ್ಭದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಅಂಗದಾನ ಮತ್ತು ಕಸಿ ಮಾಡುವಿಕೆಗೆ ಸಂಬಂಧಿಸಿ ಮೂಢನಂಬಿಕೆ ಹೋಗಲಾಡಿಸುವುದು ಒಳಗೊಂಡಿದೆ. ಅಂಗಾಂಗ ಕಸಿಗೆ ನೋಂದಾಯಿತ ಆಸ್ಪತ್ರೆಗಳು ಬೆಂಗಳೂರು ವಲಯದಲ್ಲಿ 51 ಮಂಗಳೂರು 12 ಹುಬ್ಬಳ್ಳಿ– ಧಾರವಾಡ 7 ಕಲಬುರಗಿ 4 ಹಾಗೂ ಮೈಸೂರು 8 ಸೇರಿ ಒಟ್ಟು 82 ಕಡೆಗಳಲ್ಲಿ ಇವೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ರೀಲ್ಸ್‌ ಸ್ಪರ್ಧೆ ಡ್ರಾಯಿಂಗ್‌ ಹಾಗೂ ಪೋಸ್ಟರ್‌ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.