ಉಳ್ಳಾಲ (ದಕ್ಷಿಣ ಕನ್ನಡ): ಅಂಗಾಂಗ ದಾನ ಪ್ರಕ್ರಿಯೆ ಸರಳೀಕರಿಸಲು ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಅಂಗಾಂಗ ದಾನ ಸ್ವೀಕರಣಾ ಕೇಂದ್ರ ತೆರೆದು ಮೂಲಸವಲತ್ತು ಒದಗಿಸಲಾಗುವುದು ಎಂದು ಆರೋಗ್ಯ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ, ಯೇನೆಪೊಯ ವೈದ್ಯಕೀಯ ಕಾಲೇಜು ದೇರಳಕಟ್ಟೆ ಆಶ್ರಯದ್ಲಲಿ ದೇರಳಕಟ್ಟೆಯ ಯೇನೆಪೊಯ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ನಡೆದ ಭಾರತೀಯ ಅಂಗಾಂಗ ದಾನ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗಾಂಗ ದಾನದ ಬಗ್ಗೆ ಮನವರಿಕೆ ಮಾಡಲು ಬಿಎಂಎಸ್ಟಿ ಎನ್ಜಿಒ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಮಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಸಲಹೆಗಾರರನ್ನು ನೇಮಕ ಮಾಡಲಾಗುವುದು ಎಂದರು.
ಅಂಗಾಂಗ ದಾನ ಪ್ರತಿಜ್ಞೆ ಕೈಗೊಳ್ಳುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು. ಅಂಗಾಂಗ ದಾನಿಗಳಿಗೆ ಪ್ರೋತ್ಸಾಹ ನೀಡಲು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂದು ಪ್ರತಿ ಜಿಲ್ಲೆಗಳಲ್ಲಿ ಅಂಗಾಂಗ ದಾನಕ್ಕೆ ನೋಂದಾಯಿಸಿದವರನ್ನು ಗೌರವಿಸಲಾಗುತ್ತದೆ. ರಾಜ್ಯದಲ್ಲಿ 4,582 ಮಂದಿ ಕಿಡ್ನಿ ಪಡೆದುಕೊಳ್ಳಲು ಕಾಯುತ್ತಿದ್ದಾರೆ. 583 ಮಂದಿ ಯಕೃತ್, 133 ಮಂದಿ ಹೃದಯ, 31 ಮಂದಿ ಶ್ವಾಸಕೋಶ ಸೇರಿದಂತೆ 5,387 ಮಂದಿ ವಿವಿಧ ಅಂಗಾಂಗಕ್ಕಾಗಿ ಕಾಯುತ್ತಿದ್ದಾರೆ. ಕಳೆದ ವರ್ಷ 162 ದಾನಿಗಳು 457 ಅಂಗಾಂಗ ದಾನ ಮಾಡಿದ್ದಾರೆ. ಈ ವರ್ಷ ಜುಲೈವರೆಗೆ 122 ದಾನಿಗಳು 326 ಅಂಗ ದಾನ ಮಾಡಿದ್ದಾರೆ. ಇದರೊಂದಿಂಗೆ ಕಳೆದ ವರ್ಷದ ಗುರಿಯನ್ನು ಈ ವರ್ಷ ಮೀರಿಸಲಿದ್ದೇವೆ. ಅಂಗಾಗ ದಾನ ಪ್ರತಿಜ್ಞೆಯಲ್ಲಿ ದೇಶದಲ್ಲಿ ಕರ್ನಾಟಕ ಅಗ್ರ ಮೂರನೇ ಸ್ಥಾನದೊಳಗಿದೆ ಎಂದರು.
ಅಂಗಾಂಗ ದಾನಿಗಳ ಹಾಗೂ ಸ್ವೀಕರಿಸುವವರ ರಕ್ತದ ಹೊಂದಾಣಿಕೆ ಪರೀಕ್ಷೆಗೆ ವೆನ್ಲಾಕ್ ಜಿಲ್ಲಾಸ್ಪತ್ರೆ, ಶಿವಮೊಗ್ಗ, ಮೈಸೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುವುದು. ರಕ್ತದ ಹೊಂದಾಣಿಕೆಗೆ ರಕ್ತದ ಮಾದರಿಯನ್ನು ಈ ಹಿಂದೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು. ಇದರಿಂದಾಗಿ ಫಲಿತಾಂಶ ಪಡೆಯಲು ವಿಳಂಬವಾಗುತ್ತಿತ್ತು. ಇದೀಗ ಬೆಂಗಳೂರು ಮೆಡಿಕಲ್ ಸರ್ವಿಸ್ ಟ್ರಸ್ಟ್ (ಬಿಎಂಎಸ್ಟಿ) ಸಹಯೋಗದಲ್ಲಿ ಜಿಲ್ಲಾಸ್ಪತ್ರೆಗಳಲ್ಲೇ ಲ್ಯಾಬ್ ತೆರೆಯುತ್ತೇವೆ. ಇದರೊಂದಿಗೆ ಶೀಘ್ರ ಫಲಿತಾಂಶ ಲಭಿಸಲು ಸಾಧ್ಯ ಎಂದರು.
ಅಂಗಾಂಗ ದಾನಿಗಳ 15 ಕುಟುಂಬ ಸದಸ್ಯರನ್ನು ಗೌರವಿಸಲಾಯಿತು. ಅಂಗಾಂಗ ದಾನ ಜಾಗೃತಿ ಕುರಿತು ನಡೆದ ವಿವಿಧ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು.
ಜೀವ ಸಾರ್ಥಕತೆ/ ಸೋಟೋ ಸಂಚಾಲಕ ಡಾ.ರವಿಶಂಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಆರೋಗ್ಯ–ಕುಟುಂಬ ಕಲ್ಯಾಣ ಸೇವೆಯ ಮೈಸೂರು ವಿಭಾಗದ ಉಪ ನಿರ್ದೇಶಕಿ ಡಾ.ಮಲ್ಲಿಕಾ ಬಿ., ದಕಜಿಪಂ ಸಿಇಒ ವಿನಾಯಕ್ ನರ್ವಡೆ, ಯನೆಪೊಯ ವಿವಿ ಸಹ ಕುಲಪತಿ ಡಾ.ಬಿ.ಎಚ್.ಶ್ರೀಪತಿ ರಾವ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಲೇಡಿಗೋಷನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್., ಜಿಲ್ಲಾ ಶಸ್ತಚಿಕಿತ್ಸಕ ಡಾ.ಶಿವಪ್ರಕಾಶ್ ಡಿ.ಎಸ್., ಡಿಟಿಸಿ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್, ಕಾರ್ಯಕ್ರಮದ ನೋಡೆಲ್ ಅಧಿಕಾರಿ ಡಾ.ಜೆಸಿಂತಾ ಭಾಗವಹಿಸಿದ್ದರು.
ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಸ್ವಾಗತಿಸಿ, ಜೀವ ಸಾರ್ಥಕತೆ/ಸೋಟೋ ಕಾರ್ಯಕ್ರಮ ಅಧಿಕಾರಿ ಡಾ.ಅರುಣ್ ಕುಮಾರ್ ವಂದಿಸಿದರು. ಮಲ್ಲಿಕಾ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.