ಸುಳ್ಯ: ಇಲ್ಲಿನ ಸೀಮೆ ದೇವಸ್ಥಾನ ತೊಡಿಕಾನ ಮಲ್ಲಿಕಾರ್ಜುನ ಕ್ಷೇತ್ರದ ದೇವರ ಗುಂಡಿ ಜಲಪಾತದಲ್ಲಿ ಮಾಡೆಲ್ಗಳ ಫೋಟೊಶೂಟ್ ಮಾಡಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಚಿತ್ರಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಧಾರ್ಮಿಕ ಕ್ಷೇತ್ರಗಳಲ್ಲಿ ಈ ಚಿತ್ರ ತೆಗೆದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಪ್ರದೇಶವು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಹೀಗಾಗಿ, ಇಲಾಖೆ ಅಧಿಕಾರಿಗಳು ಚಿತ್ರ ತೆಗೆದಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕ್ಷಮೆ ಯಾಚನೆ: ‘ನಾನು ಅಕ್ಟೋಬರ್ ಪ್ರಥಮ ವಾರದಲ್ಲಿ ತೊಡಿಕಾನಕ್ಕೆ ಹೋಗಿ ಜಲಪಾತದ ಸ್ಥಳದಲ್ಲಿ ಫೋಟೊ ಶೂಟ್ ನಡೆಸಿದ್ದೆ. ಅದು ಧಾರ್ಮಿಕ ಸ್ಥಳ ಎಂದು ನನಗೆ ಹಾಗೂ ಫೋಟೊಗ್ರಾಫರ್ಗೆ ಗೊತ್ತಿರಲಿಲ್ಲ. ಸ್ಥಳೀಯರೂ ಹೇಳಿರಲಿಲ್ಲ. ಯಾರೂ ನನಗೆ ತೊಂದರೆಯೂ ಮಾಡಿಲ್ಲ. ಹೀಗಾಗಿ, ಈ ತನಕ ಏನೂ ಸಮಸ್ಯೆ ಆಗಿರಲಿಲ್ಲ. ಸುಳ್ಯದ ಸ್ಥಳೀಯ ಪತ್ರಿಕೆಯು ವಿಷಯ ಹಾಕಿದ ಬಳಿಕ, ಆಕ್ಷೇಪ ಬಂತು ಎಂದು ತಿಳಿದು ಬಂತು. ತಕ್ಷಣವೇ, ಎಲ್ಲ ಫೋಟೊಗಳನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದೇನೆ. ಕ್ಷಮಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ಬೆಂಗಳೂರಿನ ನಟಿ ಬೃಂದಾ ಅರಸ್ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.