ಮಂಗಳೂರು: ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಣ ಮಾಡಿರುವ ವಾಣಿಜ್ಯ ಸಂಕೀರ್ಣಗಳಿಗೆ ನೋಟಿಸ್ ನೀಡಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿಕಾಸ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಫೋನ್–ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗೆ ಅವರು ಉತ್ತರಿಸಿದರು.
ನಗರದ ಹಲವೆಡೆ ಫುಟ್ಪಾತ್ ಗಳಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವಾಣಿಜ್ಯ ಸಂಕೀರ್ಣಗಳೂ ಫುಟ್ಪಾತ್ಗಳನ್ನು ಅತಿಕ್ರಮ ಮಾಡಿಕೊಂಡು, ಗ್ರಾಹಕರ ವಾಹನ ನಿಲುಗಡೆ ಅವಕಾಶ ಮಾಡಿಕೊಟ್ಟಿವೆ. ಎರಡು ತಿಂಗಳ ಹಿಂದೆ ಇಂತಹ 50 ಕಟ್ಟಡಗಳನ್ನು ಗುರುತಿಸಿ, ಮಹಾನಗರ ಪಾಲಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಲಾಗಿದೆ. ಆದರೆ, ಪಾಲಿಕೆಯಿಂದ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯಿಂದಲೇ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ನಗರದಾದ್ಯಂತ ರಸ್ತೆ ವಿಸ್ತಾರ ಕಾಮಗಾರಿ ಪೂರ್ಣಗೊಂಡ ನಂತರ, ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್ ಸ್ಥಳಗಳನ್ನು ನಿಗದಿ ಮಾಡಲಾಗುವುದು. ಜೊತೆಗೆ ನೋ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗುವುದು. ಈ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ವಾಹನಗಳ ಓಡಾಟ, ಸುರಕ್ಷತೆ ಹಾಗೂ ಜನರ ಸಂಚಾರಕ್ಕೆ ತೊಂದರೆ ಆಗಲಿದೆ ಎಂದು ತಿಳಿಸಿದರು.
91 ದೂರು: ತುರ್ತು ಸಂಖ್ಯೆ 112 ಆರಂಭಿಸಿದ ನಂತರ ಇಲ್ಲಿಯವರೆಗೆ 112 ದೂರುಗಳು ಬಂದಿವೆ ಎಂದು ವಿಕಾಸ್ಕುಮಾರ್ ವಿಕಾಸ್ ತಿಳಿಸಿದರು.
ಆ ಪೈಕಿ ಒಂದು ಪ್ರಕರಣ ಕುಟುಂಬದ ಆಸ್ತಿಗೆ ಸಂಬಂಧಿಸಿದ್ದಾಗಿದೆ. ಉಳಿದಂತೆ ಸಣ್ಣ ಪುಟ್ಟ ದೂರುಗಳಿದ್ದು, ಅವುಗಳನ್ನು ಪರಿಹರಿಸಲಾಗಿದೆ ಎಂದರು.
ಪೊಲೀಸ್ ಇಲಾಖೆಯಿಂದ ತ್ವರಿತ ಪ್ರತಿಕ್ರಿಯೆ ಲಭಿಸುವ ಉದ್ದೇಶದಿಂದ 112 ಸೇವೆ ಆರಂಭಿಸಲಾಗಿದೆ. ಇದರಿಂದ ಸಣ್ಣ ಪುಟ್ಟ ಪ್ರಕರಣಗಳನ್ನು ತ್ವರಿತಗತಿಯಲ್ಲಿ ನಿವಾರಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಡಿಸಿಪಿ ವಿನಯ ಗಾಂವ್ಕರ್, ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.