ಮಂಗಳೂರು: ನಗರದಲ್ಲಿ ಮೊಬೈಲ್ ಕಳವಾದ 105 ನಿಮಿಷದಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂತ್ರಜ್ಞಾನದ ಬಳಕೆಯಿಂದ ಪ್ರಕರಣ ತ್ವರಿತಗತಿಯಲ್ಲಿ ಭೇದಿಸಿರುವ ಪೊಲೀಸರು, ಕಳವು 11 ಮೊಬೈಲ್ ಗಳನ್ನೂ ವಶಕ್ಕೆ ಪಡೆದಿ ದ್ದಾರೆ.
ಕರಂಗಲ್ಪಾಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಮಲಗಿದ್ದಾಗ ಅವರ ಮೊಬೈಲ್ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಶನಿವಾರ ಸಂಜೆ 5 ಗಂಟೆಗೆ ಪೊಲೀಸ್ ಠಾಣೆಯಲ್ಲಿ ಕೂಲಿ ಕಾರ್ಮಿಕರು ಪ್ರಕರಣ ದಾಖಲಿಸಿದ್ದರು.
ತ್ವರಿತಗತಿಯಲ್ಲಿ ತನಿಖೆ ಆರಂಭಿ ಸಿದ ಮಂಗಳೂರು ಉತ್ತರ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಬಿ., ಸಬ್ ಇನ್ಸ್ಪೆಕ್ಟರ್ಗಳಾದ ಗುರುಕಾಂತಿ, ನಾಗರಾಜ್, ಹೆಡ್ ಕಾನ್ಸ್ಟೆಬಲ್ ಭರತ್, ವೆಲೆಂಟೈನ್ ಡಿಸೋಜ, ಕಾನ್ಸ್ಟೆಬಲ್ ತಿಪ್ಪರಡ್ಡೆಪ್ಪ ಅವರನ್ನು ಒಳಗೊಂಡ ತಂಡ ಸಂಜೆ 6.45 ಕ್ಕೆ ನಗರದ ಲಾಡ್ಜ್ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದೆ. ಮೊಹ್ಮದ್ ಸುಹೈಲ್, ಮೊಹಮ್ಮದ್ ಸರ್ಫರಾಜ್, ಮೊಹಮ್ಮದ್ ಸಫ್ವಾನ್ ಬಂಧಿತ ಆರೋಪಿಗಳು. ಮೊಹ್ಮದ್ ಸರ್ಫರಾಜ್ ವಿರುದ್ಧ ಈಗಾಗಲೇ ಎರಡು ಕಳವು ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ ಎರಡು ಬೈಕ್ ವಶಕ್ಕೆ ಪಡೆಯಲಾಗಿದ್ದು, ಆ ಬೈಕ್ಗಳ ಮಾಲೀಕತ್ವದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ಕುಮಾರ್ ವಿಕಾಸ್ ತಿಳಿಸಿದ್ದಾರೆ.
ತ್ವರಿತ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಗೋವಿಂದರಾಜು ಹಾಗೂ ತಂಡದ ಕಾರ್ಯ ಶ್ಲಾಘನೀಯ. ಈ ತಂಡ ತಂತ್ರಜ್ಞಾನದ ಸಹಕಾರ ಹಾಗೂ ಅಪರಾಧ ಪತ್ತೆ ಕೌಶಲವನ್ನು ಬಳಸಿ ಈ ಪ್ರಕರಣವನ್ನು ಕಡಿಮೆ ಸಮಯದಲ್ಲಿ ಭೇದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.