ADVERTISEMENT

ಮಂಗಳೂರು: ಕುತೂಹಲ ಸೃಷ್ಟಿಸಿದ ಎರಡು ಶಾಸನ

ಹೊಯ್ಗೆ ಬಜಾರ್‌ ಮೀನುಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 3:12 IST
Last Updated 16 ಮಾರ್ಚ್ 2021, 3:12 IST
ಮಂಗಳೂರಿನಲ್ಲಿ ಪತ್ತೆಯಾಗಿರುವ ಎರಡು ಶಾಸನಗಳ ಪಡಿಯಚ್ಚು ತಯಾರಿಸಲಾಯಿತು. ಶಾಸನ ತಜ್ಞರು ಪರಿಶೀಲನೆ ನಡೆಸಿದರು.
ಮಂಗಳೂರಿನಲ್ಲಿ ಪತ್ತೆಯಾಗಿರುವ ಎರಡು ಶಾಸನಗಳ ಪಡಿಯಚ್ಚು ತಯಾರಿಸಲಾಯಿತು. ಶಾಸನ ತಜ್ಞರು ಪರಿಶೀಲನೆ ನಡೆಸಿದರು.   

ಮಂಗಳೂರು: ನಗರದ ಹೊಯ್ಗೆ ಬಜಾರ್‌ನ ಮೀನುಗಾರಿಕಾ ಸಂಶೋ ಧನಾ ಕೇಂದ್ರದ ಆವರಣದಲ್ಲಿ ಕಾಮಗಾರಿಯ ಸಂದರ್ಭದಲ್ಲಿ 2 ಶಾಸನ ಗಳು ಪತ್ತೆಯಾಗಿವೆ. ಒಂದು ಶಾಸನ 11ನೇ ಶತಮಾನದ್ದು, ಇನ್ನೊಂದು ಪೋರ್ಚುಗೀಸರ ಕಾಲದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ಶಾಸನಗಳನ್ನು ಮೈಸೂರಿನ ಪುರಾತತ್ವ ಇಲಾಖೆಯ ಸಹಾಯಕ ಶಾಸನ ತಜ್ಞರು ಪರಿಶೀಲಿಸಿದ್ದು, ಅದರ ಪಡಿಯಚ್ಚು ಪಡೆದಿದ್ದಾರೆ.

‘ಪ್ರಾಥಮಿಕ ಮಾಹಿತಿಯ ಪ್ರಕಾರ, ಹಳೆಗನ್ನಡ ಮಾದರಿಯ ಸುಮಾರು 11 ಸಾಲಿನ ಶಾಸನ 11ನೇ ಶತಮಾನದ ಕನ್ನಡವನ್ನು ಹೋಲುತ್ತಿದೆ. ಇನ್ನೊಂದು ಶಾಸನದ ಲಿಪಿ ಪೋರ್ಚುಗೀಸ್ ಭಾಷೆಯನ್ನು ಹೊಂದಿದೆ. ಈ ಶಾಸನಗಳ ಇನ್ನಷ್ಟು ಪರಿಶೀಲನೆ ಹಾಗೂ ಅಧ್ಯಯನ ಅಗತ್ಯವಾಗಿದೆ’ ಎಂದು ಸಹಾಯಕ ಶಾಸನ ತಜ್ಞರಾದ ಶ್ರೀದೇವಿ ತೇಜಸ್ವಿನಿ ಹಾಗೂ ವೀರ ಮಣಿಕಂಠನ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಮೀನುಗಾರಿಕೆ ಕಾಲೇಜಿನ ಕೌಶಲ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ತರಬೇತಿ ಕೇಂದ್ರದ ಕಟ್ಟಡಕ್ಕಾಗಿ ಅಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿ, ಅಡಿಪಾಯಕ್ಕಾಗಿ ಮಣ್ಣು ಅಗೆಯತ್ತಿರುವ ವೇಳೆ ಸುಮಾರ 5 ಅಡಿಯಷ್ಟು ಉದ್ದದ ಈ ಶಾಸನಗಳು ಕಂಡು ಬಂದಿದ್ದವು. ಅದನ್ನು ಕಟ್ಟಡ ನಿರ್ಮಾಣದ ವೇಳೆ ಬದಿಯಲ್ಲೇ ಹಾಕಲಾಗಿತ್ತು ಎಂದು ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಎ.ಸೆಂಥಿಲ್‌ ವೇಲ್ ತಿಳಿಸಿದರು.

‘ಶನಿವಾರ (ಮಾ. 13ರಂದು) ಮೀನುಗಾರಿಕಾ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿ ಶ್ರೇಯಸ್, ಕಲ್ಲಿನ ಮೇಲಿನ ಬರಹ ಕಂಡು ಆಸಕ್ತಿಯಿಂದ ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ್ದರು. ಅಂದು ಮಧ್ಯಾಹ್ನ ಅದನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ತಕ್ಷಣ ಪ್ರಧಾನ ಮಂತ್ರಿ ವರ ಕಚೇರಿಗೆ ಫೋಟೊ ಮೇಲ್ ಮಾಡಿದ್ದೆ. ಸುಮಾರು 10 ನಿಮಿಷಗಳಲ್ಲೇ ಪ್ರತಿಕ್ರಿಯೆ ಬಂದಿದ್ದು, ಸಂಸ್ಕೃತಿ ಇಲಾಖೆಯ ಮುಖ್ಯಸ್ಥೆ ವಿದ್ಯಾವತಿ ಅವರು, ಈ ಬಗ್ಗೆ ಪರಿಶೀಲಿಸುವಂತೆ ಪುರಾತತ್ವ ಇಲಾಖೆಯ ಮೈಸೂರು ವಿಭಾಗದ ಸಹಾಯಕ ಶಾಸನ ತಜ್ಞರಿಗೆ ಸೂಚನೆ ನೀಡಿದ್ದರು. ಅದರಂತೆ ಸೋಮವಾರ ಬೆಳಿಗ್ಗೆ ಶಾಸನ ತಜ್ಞರು ಹಾಗೂ ಸಿಬ್ಬಂದಿ ಬಂದಿದ್ದು, ಶಾಸನಗಳ ಪಡಿಯಚ್ಚು ಪಡೆದುಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅಧ್ಯಯನ ಅಗತ್ಯ’
‘ಹಳೆಗನ್ನಡದಂತಿರುವ ಒಂದು ಶಾಸನ ದಾನ ಶಾಸನ ವಾಗಿ ಮೇಲ್ನೋಟಕ್ಕೆ ಗೋಚರಿ ಸಿದೆ. ಆದರೆ ಅದರಲ್ಲಿ ಕೆಲವೊಂದು ಅಕ್ಷರಗಳು ಮಾಸಿ ಹೋಗಿರುವ ಕಾರಣ ಅದರ ನಿಖ ರತೆ, ಕಾಲಮಾನದ ಕುರಿತಂತೆ ಲಿಪಿಶಾಸ್ತ್ರದ ಮೂಲಕ ಇನ್ನಷ್ಟು ಅಧ್ಯಯನದ ಅಗತ್ಯವಿದೆ’ ಎಂದು ಶ್ರೀದೇವಿ ತೇಜಸ್ವಿನಿ ತಿಳಿಸಿದರು.

ಪಡಿಯಚ್ಚು ಪಡೆಯ ಲಾಗಿದ್ದು, ಭಾಷೆ ಹಾಗೂ ಲಿಪಿ ತಜ್ಞರ ಮೂಲಕ ಇದನ್ನು ಇನ್ನಷ್ಟು ಸಂಶೋಧನೆಗೆ ಒಳಪಡಿಸಿ ಶಾಸನದ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುವುದು ಎಂದರು.

ಶಾಸನಗಳ ಪಡಿಯಚ್ಚು ಪಡೆಯಲಾಗಿದ್ದು, ಅದರ ವರದಿಯನ್ನು ಇಂಡಿಯನ್ ಎಪಿಗ್ರಫಿ ವಾರ್ಷಿಕ ವರದಿಯಲ್ಲಿ ಪ್ರಕಟಿಸಲಾಗುವುದು. ಈ ಶಾಸನಗಳು ಮತ್ತಷ್ಟು ಹಳೆಯ ಶಾಸನಗಳ ಹುಡುಕಾಟ ಹಾಗೂ ಅಧ್ಯಯನ, ಶೋಧನೆಗೆ ಅವಕಾಶ ನೀಡುತ್ತವೆ ಎಂದು ಇನ್ನೊಬ್ಬ ಶಾಸನ ತಜ್ಞ ವೀರ ಮಣಿಕಂಠನ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.