ADVERTISEMENT

ಸಕಾರಾತ್ಮಕ ವರದಿಯಿಂದ ಸಮಾಜದಲ್ಲಿ ಎಚ್ಚರ: ಕಡಬ ಪಿಎಸ್‌ಐ ರುಕ್ಮ ನಾಯ್ಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 3:42 IST
Last Updated 15 ಜುಲೈ 2021, 3:42 IST
ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಿಕಾ ವಿತರಕ ಬಾಲಕೃಷ್ಣ ರೈ ಅವರನ್ನು ಸನ್ಮಾನಿಸಲಾಯಿತು.
ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಿಕಾ ವಿತರಕ ಬಾಲಕೃಷ್ಣ ರೈ ಅವರನ್ನು ಸನ್ಮಾನಿಸಲಾಯಿತು.   

ಕಡಬ(ಉಪ್ಪಿನಂಗಡಿ): ‘ಸಮಾಜದ ಅಂಕು–ಡೊಂಕುಗಳನ್ನು ತಿಳಿದು, ಸಕಾರಾತ್ಮಕ ಚಿಂತನೆಯ ವರದಿ ಮಾಡುವುದು ಪತ್ರಕರ್ತನ ಜವಾಬ್ದಾರಿಯಾಗಿದೆ. ಸಾಮಾಜಿಕ ಬದಲಾವಣೆಯ ಸುದ್ದಿಗಳು ಹೆಚ್ಚು ಪ್ರಕಟಗೊಂಡಾಗ ಸಮಾಜ ಎಚ್ಚರದಲ್ಲಿರುತ್ತದೆ’ ಎಂದು ಕಡಬ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರುಕ್ಮ ನಾಯ್ಕ ಹೇಳಿದರು.

ಪತ್ರಕರ್ತರ ಸಂಘದ ಕಡಬ ತಾಲ್ಲೂಕು ಘಟಕದ ವತಿಯಿಂದ ಈಚೆಗೆ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಸಮಾಜ ಬದಲಾವಣೆಗೆ ಪತ್ರಕರ್ತರು ವರದಿ ಮೂಲಕ ಮಾತ್ರ ಕೊಡುಗೆ ನೀಡುತ್ತಾರೆ. ಅಭಿವೃದ್ಧಿ ವಿಚಾರಕ್ಕೂ ಕೈ ಹಾಕುತ್ತಾರೆ ಎನ್ನುವುದಕ್ಕೆ ಕೆಲವು ತಿಂಗಳ ಹಿಂದೆ ಕಡಬ ತಾಲ್ಲೂಕಿನ ಕುಗ್ರಾಮವಾದ ಕೊಂಬಾರು ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತ್ಯವ್ಯ ಕಾರ್ಯಕ್ರಮ ಉದಾಹರಣೆಯಾಗಿದೆ. ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳನ್ನು ಸೇರಿಸಿ, ಗ್ರಾಮ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಕಾರ್ಯಕ್ಕೂ ಮುಂದಾಗಿರುವುದು ಶ್ಲಾಘನೀಯ’ ಎಂದರು.

ಲಯನ್ಸ್ ಕ್ಲಬ್ ಕಡಬ ಘಟಕ ಅಧ್ಯಕ್ಷ ಕೆ.ಎಸ್. ದಿನೇಶ್ ಆಚಾರ್ಯ ಮಾತನಾಡಿ, ಪತ್ರಿಕಾ ಧರ್ಮ ಪಾಲಿಸುವ ಪತ್ರಕರ್ತನಿಗೆ ಸಮಾಜದಲ್ಲಿ ಸ್ಥಾನ–ಮಾನಕ್ಕೆ ಕೊರತೆಯಾಗುವುದಿಲ್ಲ ಎಂದರು.

ADVERTISEMENT

ಘಟಕದ ಅಧ್ಯಕ್ಷ ನಾಗರಾಜ್ ಎನ್.ಕೆ. ಅಧ್ಯಕ್ಷತೆ ವಹಿಸಿದ್ದರು. ಕಡಬದ ಹಿರಿಯ ಪತ್ರಿಕಾ ವಿತರಕ ಬಾಲಕೃಷ್ಣ ರೈ ಅವರನ್ನು ಸನ್ಮಾನಿಸಲಾಯಿತು. ಬಾಲಕೃಷ್ಣ ಕೊಯಿಲ ಸ್ವಾಗತಿಸಿದರು. ವಿಜಯ ಕುಮಾರ್ ಪೆರ್ಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.