ADVERTISEMENT

ಅಷ್ಟಮಿ ಖರೀದಿ ಜೋರು: ತರಕಾರಿ, ಹೂವಿನ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 14:38 IST
Last Updated 22 ಆಗಸ್ಟ್ 2019, 14:38 IST
ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆಯ ಬಳಿ ಗುರುವಾರ ಹೂವಿನ ವ್ಯಾಪಾರ ನಡೆಯಿತು.
ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆಯ ಬಳಿ ಗುರುವಾರ ಹೂವಿನ ವ್ಯಾಪಾರ ನಡೆಯಿತು.   

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ನಗರದಾದ್ಯಂತ ಸಿದ್ಧತೆ ಪೂರ್ಣಗೊಂಡಿವೆ. ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದ್ದು, ಗುರುವಾರ ನಗರದ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿಯೇ ನಡೆಯಿತು. ಹಬ್ಬದ ತಯಾರಿ ಬಿರುಸಾಗಿದ್ದು, ಹೂ, ಹಣ್ಣು ವ್ಯಾಪಾರಸ್ಥರು ಬಿಡುವಿಲ್ಲದ ವ್ಯಾಪಾರದಲ್ಲಿ ತೊಡಗಿದ್ದಾರೆ.

ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬ ಕಳೆದು, ಇದೀಗ ಅಷ್ಟಮಿ ಬಂದಿದೆ ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ನಗರದ ದೇವಸ್ಥಾನ, ಸಂಘ-ಸಂಸ್ಥೆಗಳಲ್ಲಿ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ಉತ್ತರ ಕರ್ನಾಟಕ ಜಿಲ್ಲೆಗಳಿಂದಲೂ ವ್ಯಾಪಾರಸ್ಥರು ನಗರಕ್ಕೆ ಬಂದಿದ್ದು, ಬಿಜೈ, ಹಂಪನಕಟ್ಟೆ, ಕಂಕನಾಡಿ, ಸ್ಟೇಟ್‌ಬ್ಯಾಂಕ್‌, ರಥಬೀದಿ ಮುಂತಾದೆಡೆಗಳಲ್ಲಿ ಹೂ, ಹಣ್ಣು, ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ.

ಎರಡು ದಿನಗಳಿಂದಲೇ ಖರೀದಿ ಜೋರಾಗಿ ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಹೂವು, ಹಣ್ಣು, ತರಕಾರಿಗಳ ಖರೀದಿಯಲ್ಲಿ ತೊಡಗಿರುವ ಜನರು, ಅಷ್ಟಮಿಯ ಆಚರಣೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ADVERTISEMENT

ಏರಿಕೆಯಾದ ತರಕಾರಿ: ಮಳೆಯಿಮದಾಗಿ ಚಾರ್ಮಾಡಿ ಘಾಟಿ ಸಂಚಾರ ಸ್ಥಗಿತವಾಗಿದ್ದು, ಘಟ್ಟಕದ ಮೇಲಿನಿಂದ ನಗರಕ್ಕೆ ತರಕಾರಿ ತರಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತರಕಾರಿ ಬೆಲೆ ಏರಿಕೆಯಾಗಿದೆ.

ಅಷ್ಟಮಿಯ ಅಡುಗೆಗೆ ತರಕಾರಿ ಬೆಲೆ ಏರಿಕೆ ಮತ್ತಷ್ಟು ಬಿಸಿ ಮುಟ್ಟಿಸಿದಂತಾಗಿದೆ. ಕೆಜಿಗೆ ₹100 ಇದ್ದ ಊರಿನ ಬೆಂಡೆಯ ಬೆಲೆ ಈಗ ₹240ಕ್ಕೆ ಏರಿದೆ. ₹80ಇದ್ದ ಹಾಗಲಕಾಯಿಗೆ ₹100, ₹50 ಇದ್ದ ಹೀರೆಕಾಯಿ ಬೆಲೆ ₹100 ಕ್ಕೆ ಹೆಚ್ಚಳವಾಗಿದೆ. ಮಳೆಯಿಂದಾಗಿ ಬೆಳೆ ಹಾನಿಯಾದ ಹಿನ್ನೆಲೆಯಿಂದ ಬೆಲೆ ಏರಿಕೆ ಆಗಿದೆ ಎನ್ನುವುದು ಸೆಂಟ್ರಲ್‌ ಮಾರುಕಟ್ಟೆ ವ್ಯಾಪಾರಿ ರಶೀದ್ ಹೇಳುವ ಮಾತು.

ತರಕಾರಿಯ ಬೆಲೆ ಹೆಚ್ಚಾಗಿದ್ದರೂ, ಹಣ್ಣುಗಳ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಹಣ್ಣಿನ ಪೂರೈಕೆ ಹೆಚ್ಚಾಗಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಹಣ್ಣು ಸಿಗುತ್ತಿವೆ ಎಂದು ವ್ಯಾಪಾರಿ ಡೇವಿಡ್‌ ಹೇಳಿದ್ದಾರೆ.

ಅಷ್ಟಮಿಗೆ ಮೂಡೆ ತಯಾರಿಸುವುದು ವಾಡಿಕೆಯಾಗಿದ್ದು, ಗುರುವಾರ ಮೂಡೆ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು. ಅದಕ್ಕಾಗಿಯೇ ವ್ಯಾಪಾರಸ್ಥರು ಮೂಡೆಯನ್ನೂ ಮಾರಾಟ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.