ಮಂಗಳೂರು: ಪ್ರಯಾಣಿಕರಿಗೆ ಸಂಚಾರದ ಜೊತೆ ಹೊಸತನದ ಸಾಮಾಜಿಕ ಸೇವೆ– ಪ್ರಯೋಗ ಮಾಡುತ್ತಿರುವ ಮಂಗಳೂರು ನಗರ ಸಂಚಾರ ಸಾರಿಗೆ (ಖಾಸಗಿ ಸಿಟಿ ಬಸ್) ಈಗ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ.
ಮಂಗಳೂರಿನ ರೂಟ್ ನಂಬರ್ 27ರ ಗಣೇಶ್ ಪ್ರಸಾದ್ ಬಸ್ ಮೇಲೆ ಡ್ರಗ್ಸ್ ವಿರುದ್ಧದ ಜಾಗೃತಿಯನ್ನು ಚಿತ್ರಿಸಲಾಗಿದೆ. ‘Life is in your hand', ‘Drug will doom', 'say no to drug' ಎಂಬಿತ್ಯಾದಿ ಘೋಷವಾಕ್ಯಗಳನ್ನು ಬರೆದು, ಚಿತ್ರಿಸಲಾಗಿದೆ. ಈ ಬಸ್ ಸ್ಟೇಟ್ ಬ್ಯಾಂಕ್ ಹಾಗೂ ಅತ್ತಾವರ ಮಾರ್ಗವಾಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂದೇಶ ನೀಡುವುದು ಉದ್ದೇಶವಾಗಿದೆ.
‘ನಾವು (ಖಾಸಗಿ ಸಿಟಿ ಬಸ್) ಸಂಚಾರದ ಜೊತೆ ಸಾಮಾಜಿಕ ಸಂದೇಶ ಹಾಗೂ ಕೊಡುಗೆ ನೀಡುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಈ ಹಿಂದೆ ತುಳು ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ನೀರು ಉಳಿಸಿ ಮತ್ತಿತರ ಜಾಗೃತಿ ಜೊತೆ ಕೈ ಜೋಡಿಸಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ತಿಳಿಸಿದರು.
ಚೇತರಿಕೆ ನೀಡಿದ ದಸರಾ:ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮಂಗಳೂರು ನಗರದ ಸಿಟಿ ಬಸ್ಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಆದರೆ, ಈ ಬಾರಿ ಕೋವಿಡ್ ಪರಿಣಾಮ, ಹೆಚ್ಚಿನ ದಟ್ಟಣೆ ಕಂಡುಬಂದಿಲ್ಲ.
‘ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಲಾಭದಾಯಕವಾಗಿರುತ್ತಿತ್ತು. ಈ ಬಾರಿ ಲಾಕ್ಡೌನ್ ಬಳಿಕ ನಷ್ಟದಲ್ಲಿ ಇದ್ದೇವೆ. ಆದರೆ, ದಸರಾ ಬಳಿಕ ಸ್ವಲ್ಪ ಚೇತರಿಕೆ ಕಂಡಿದ್ದು, ಬಹುತೇಕ ಎಲ್ಲ ಬಸ್ಗಳೂ ರಸ್ತೆಗಿಳಿದಿವೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.