ADVERTISEMENT

ಪುತ್ತೂರು ಜಾತ್ರೆ: ಹಿಂದೂಗಳ ರಿಕ್ಷಾ ಬಳಸಲು ಅಭಿಯಾನ

ಅನ್ಯಧರ್ಮಿಯರ ವ್ಯಾಪಾರಕ್ಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 13:16 IST
Last Updated 9 ಏಪ್ರಿಲ್ 2022, 13:16 IST
ಪುತ್ತೂರು ನಗರದ ಎಪಿಎಂಸಿ ರಸ್ತೆಯ ರಿಕ್ಷಾ ತಂಗುದಾಣದಲ್ಲಿ ಶನಿವಾರ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಭಗವಧ್ವಜವನ್ನು ಹಿಂದೂ ಆಟೊ ಚಾಲಕರಿಗೆ ಹಸ್ತಾಂತರಿಸಿದರು.
ಪುತ್ತೂರು ನಗರದ ಎಪಿಎಂಸಿ ರಸ್ತೆಯ ರಿಕ್ಷಾ ತಂಗುದಾಣದಲ್ಲಿ ಶನಿವಾರ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಭಗವಧ್ವಜವನ್ನು ಹಿಂದೂ ಆಟೊ ಚಾಲಕರಿಗೆ ಹಸ್ತಾಂತರಿಸಿದರು.   

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವವು ಏ.10ರಿಂದ 20ರ ತನಕ ನಡೆಯಲಿದ್ದು, ಈ ಬಾರಿ ಅನ್ಯಧರ್ಮಿಯರಿಗೆ ಸಂತೆ ಗದ್ದೆಯಲ್ಲಿ ವ್ಯಾಪಾರ- ವ್ಯವಹಾರಕ್ಕೆ ನಿಷೇಧ ಹೇರಲಾಗಿದೆ. ಅದರ ಮುಂದುವರಿದ ಭಾಗವಾಗಿ ಜಾತ್ರೆಗೆ ಬರುವ ಭಕ್ತರು ಹಿಂದೂ ಚಾಲಕರ ಆಟೊದಲ್ಲೇ ಬರಬೇಕು ಎಂದು ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ.

ಈ ಸಂಬಂಧ ಹಿಂದೂಗಳ ಆಟೊ ರಿಕ್ಷಾಗಳಿಗೆ ಭಗವಧ್ವಜ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನಗರದ ಎಪಿಎಂಸಿ ರಸ್ತೆಯ ರಿಕ್ಷಾ ತಂಗುದಾಣದಲ್ಲಿ ಶನಿವಾರ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಅವರು ಭಗವಧ್ವಜವನ್ನು ರಿಕ್ಷಾ ಚಾಲಕರಿಗೆ ಹಸ್ತಾಂತರಿಸಿದರು.

‘ಜಾತ್ರೆಗೆ ಬರುವ ಭಕ್ತರು ಕೇಸರಿ ಧ್ವಜವಿರುವ ಆಟೊದಲ್ಲೇ ಸಂಚರಿಸುವ ಮೂಲಕ ಹಿಂದೂ ಬಡ ಆಟೊ ಚಾಲಕರಿಗೆ ಸಹಾಯ ಮಾಡಬೇಕು ಎನ್ನುವ ವಿಚಾರವನ್ನೂ ಹಿಂದೂ ಜಾಗರಣಾ ವೇದಿಕೆ ತನ್ನ ಅಭಿಯಾನದಲ್ಲಿ ಬಳಸಿಕೊಂಡಿದೆ. ಧರ್ಮವನ್ನು ಉಳಿಸುವ ಕಾರ್ಯ ನಾವು ಮಾಡಬೇಕಾಗಿದೆ’ ಎಂದುಡಾ.ಪ್ರಸಾದ್ ಭಂಡಾರಿ ಹೇಳಿದರು.

ADVERTISEMENT

ಪುತ್ತೂರಿನ ಆಟೊ ಚಾಲಕರಿಗೆ ಭಗವಧ್ವಜವನ್ನು ವಿತರಣೆ ಮಾಡುವ ಕೆಲಸವನ್ನು ಈಗಾಗಲೇ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆರಂಭಿಸಿದ್ದಾರೆ. ಜಾತ್ರೆಯ ನೆಪದಲ್ಲಿ ಅನ್ಯಧರ್ಮಿಯರು ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಜಾಲದಲ್ಲಿ ಸಿಲುಕಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ ಎಂದು ಆರೋಪಿಸಿರುವ ಕಾರ್ಯಕರ್ತರು, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದಿಂದ ಹಿಂದೂಗಳಿಗೆ ಯಾವುದೇ ಸಹಾಯ ದೊರೆಯುತ್ತಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವ ಕೆಲಸವಾಗುತ್ತಿರುವ ಕಾರಣ ಹಿಂದೂ ಸಮಾಜ ಇದೀಗ ತಾನೇ ಕಾರ್ಯಾಚರಣೆಗೆ ಇಳಿದಿದೆ ಎಂಬ ವಾದ ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.