ADVERTISEMENT

48 ಸಾವಿರ ಕ್ವಿಂಟಲ್ ಅಕ್ಕಿ ಹಂಚಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 15:39 IST
Last Updated 5 ಏಪ್ರಿಲ್ 2020, 15:39 IST

ಮಂಗಳೂರು: ಏಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರವನ್ನು ಒಟ್ಟಿಗೇ ವಿತರಿಸಲಾಗುತ್ತಿದೆ. ಇದೇ 2 ರಂದು ಪಡಿತರ ವಿತರಣೆ ಆರಂಭವಾಗಿದ್ದು, ಇದುವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.73 ಲಕ್ಷ ಕಾರ್ಡ್‌ದಾರರಿದ್ದು, ಭಾನುವಾರದವರೆಗೆ ಸುಮಾರು 98ಸಾವಿರ ಕಾರ್ಡ್‌ದಾರರಿಗೆ ಪಡಿತರದಲ್ಲಿ ಸುಮಾರು 48ಸಾವಿರ ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ. ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಅಂತ್ಯೋದಯ ಕುಟುಂಬಗಳಿಗೆ ಪ್ರತಿ ಕಾರ್ಡ್‌ಗೆ 70 ಕೆ.ಜಿ. ಹಾಗೂ ಎಪಿಎಲ್ ಕಾರ್ಡ್‌ಗಳಿಗೆ 20 ಕೆ.ಜಿ. (₹15ದರ) ಅಕ್ಕಿ ನೀಡಲಾಗುತ್ತಿದೆ.

ಸುಳ್ಯ ತಾಲ್ಲೂಕಿಗೆ ಒಟಿಪಿ ವಿನಾಯಿತಿ

ADVERTISEMENT

ಸುಳ್ಯ ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ನೆಟ್‌ವರ್ಕ್ ಸಮಸ್ಯೆ ಉಂಟಾಗಿದ್ದು, ಮೊಬೈಲ್ ಒಟಿಪಿ ಜನರೇಟ್ ಆಗುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ಕಾರ್ಡ್‌ದಾರರು ಸಾಲಿನಲ್ಲಿ ಬಹಳ ಹೊತ್ತು ನಿಲ್ಲಬೇಕಾಗಿದೆ. ಇದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟಕರವಾಗುತ್ತಿದ್ದು, ಸುಳ್ಯ ತಾಲ್ಲೂಕಿನಲ್ಲಿ ಪಡಿತರ ಪಡೆಯುವಾಗ ಒಟಿಪಿ ಕಡ್ಡಾಯದಿಂದ ರಿಯಾಯಿತಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಳ್ಯ ತಾಲ್ಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಒಟಿಪಿ ಇಲ್ಲದೆ ಪಡಿತರ ವಿತರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಒಟಿಪಿ ಮೂಲಕವೇ ಪಡಿತರ ಸುಗಮವಾಗಿ ನಡೆಯುತ್ತಿರುವುದರಿಂದ ಹಿಂದಿನಂತೆ ಒಟಿಪಿ ಮೂಲಕವೇ ಪಡಿತರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.