ADVERTISEMENT

ಧಾರ್ಮಿಕ ಫರ್ಮಾನು ಪ್ರಜಾಪ್ರಭುತ್ವ ವಿರೋಧಿ: ನಾಗಮೋಹನ ದಾಸ್

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 20:53 IST
Last Updated 9 ಸೆಪ್ಟೆಂಬರ್ 2022, 20:53 IST
ಮಂಗಳೂರಿನಲ್ಲಿ ಆಯೋಜಿಸಿದ್ದ ಮದರ್ ತೆರೇಸಾ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಮದರ್ ಥೆರೇಸಾ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು
ಮಂಗಳೂರಿನಲ್ಲಿ ಆಯೋಜಿಸಿದ್ದ ಮದರ್ ತೆರೇಸಾ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಮದರ್ ಥೆರೇಸಾ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು   

ಮಂಗಳೂರು: ‘ವ್ಯಕ್ತಿಯ ಮನಸ್ಸಿಗೆ ವಿರುದ್ಧವಾಗಿ ಧಾರ್ಮಿಕ ಫರ್ಮಾನು ಹೇರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ.ಧಾರ್ಮಿಕ ನಂಬಿಕೆಗಳ ಮೇಲೆ ರೂಪಿಸುವ ಕಾನೂನು ಕೋಮುವಾದಕ್ಕೆ ಎಡೆಮಾಡಿಕೊಡುತ್ತದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.

ಸಂತ ಮದರ್‌ ತೆರೇಸಾ ವಿಚಾರ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ನಡೆದ ಮದರ್ ತೆರೇಸಾ ಅವರ 25ನೇ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಧರ್ಮ ವಿರೋಧಿಗಳಾಗಬೇಕಿಲ್ಲ. ಆದರೆ, ಧರ್ಮವನ್ನು ಅಪ್ರಜಾಪ್ರಭುತ್ವಗೊಳಿಸುವ ಪ್ರಕ್ರಿಯೆಯನ್ನು ವಿರೋಧಿಸಬೇಕಾಗಿದೆ. ರಾಜಕಾರಣದ ಜತೆ ಧರ್ಮವನ್ನು ಸೇರಿಸುವ ಪ್ರಕ್ರಿಯೆ ನಿಲ್ಲಿಸಿ, ಕೋಮುವಾದವನ್ನು ಅರ್ಥೈಸಿಕೊಂಡರೆ, ಸಂವಿಧಾನದಲ್ಲಿರುವ ಜಾತ್ಯತೀತ ನಿಲುವು ಸ್ಪಷ್ಟಗೊಳ್ಳುತ್ತದೆ. ದುರದೃಷ್ಟವಶಾತ್, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇದನ್ನು ನಾವು ಅರಿತುಕೊಂಡಿಲ್ಲ’ ಎಂದು ವಿಷಾದಿಸಿದರು.

ADVERTISEMENT

‘ಹಿಂಸೆ, ಕ್ರೋಧ, ನೋವು ಜಗತ್ತನ್ನು ಕಾಡುತ್ತಿದೆ. ಆಹಾರ, ಬಟ್ಟೆ, ಬಣ್ಣ ಎಲ್ಲದರಲ್ಲೂ ಅಸಹಿಷ್ಣುತೆ ಕಾಣುತ್ತಿರುವ ಸಂದರ್ಭದಲ್ಲಿ, ನಮ್ಮ ಹಿರಿಯರು ಬಿಟ್ಟು ಹೋಗಿರುವ ಸಹಿಷ್ಣುತೆಯ ಪರಂಪರೆಯು ಪ್ರತಿಮನೆಯಲ್ಲಿ ಮೊಳೆತರೆ, ಸಂಘರ್ಷ ಕರಗಿ ಭಾವೈಕ್ಯತೆ ಬೆಳಗುತ್ತದೆ’ ಎಂದರು.

ಸಂತ ಮದರ್‌ ತೆರೇಸಾ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಅಧ್ಯಕ್ಷತೆ ವಹಿಸಿದ್ದರು. ಚಿಂತಕಿ ಪಲ್ಲವಿ ಇಡೂರು ‘ಬಹುತ್ವದ ಭಾರತದಲ್ಲಿ ಮಾನವೀಯ ಸೇವೆಗಳು’ ವಿಷಯದ ಮೇಲೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.