ಉಪ್ಪಿನಂಗಡಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಪ್ಪಿನಂಗಡಿಯಲ್ಲಿ ಹರಿಯುವ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳೆರಡೂ ತುಂಬಿ ಹರಿಯುತ್ತಿವೆ. ನದಿಯಲ್ಲಿ ನೀರಿನ ಹರಿವು ಏರಿಕೆಯಾಗತೊಡಗಿದೆ.
ಬಿಳಿಯೂರು ಅಣೆಕಟ್ಟೆಯ ಗೇಟ್ಗಳನ್ನು ಶುಕ್ರವಾರ ತೆರವು ಮಾಡಲಾಗಿತ್ತು. ಶನಿವಾರ ಸಂಜೆ ವೇಳೆಗೆ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಶಂಭೂರು ಅಣೆಕಟ್ಟೆಯವರು ಅಳವಡಿಸಿರುವ ಮೀಟರ್ ಪಟ್ಟಿಯಲ್ಲಿ ನದಿಯಲ್ಲಿ ನೀರಿನ ಮಟ್ಟ ಸಮುದ್ರಮಟ್ಟಕ್ಕಿಂತ 25 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದು ಕಂಡು ಬಂದಿತ್ತು.
ಭಾನುವಾರ ಮತ್ತೆ ಏರಿಕೆ: ಹವಾಮಾನ ಇಲಾಖಾ ದಾಖಲೆ ಪ್ರಕಾರ ಉಪ್ಪಿನಂಗಡಿಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಗ್ಗಿನವರೆಗೆ 4 ಸೆಂ.ಮೀ. ಮಳೆಯಾಗಿತ್ತು. ಶನಿವಾರದಿಂದ ಭಾನುವಾರ ಬೆಳಿಗ್ಗೆವರೆಗೆ 9 ಸೆಂ.ಮೀ. ಮಳೆಯಾಗಿತ್ತು. ಭಾನುವಾರ ಬೆಳಿಗ್ಗೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ಸಂಜೆ ವೇಳೆಗೆ ನದಿಯಲ್ಲಿ ನೀರಿನ ಮಟ್ಟ 32 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು.
ಧರ್ಮಸ್ಥಳ ಕಡೆಯಿಂದ ಹರಿದು ಬರುವ ನೇತ್ರಾವತಿ ನದಿಯ ಒಡಲು ಪೂರ್ಣ ಪ್ರಮಾಣದಲ್ಲಿ ತುಂಬಿರಲಿಲ್ಲ. ಆದರೆ, ಕುಮಾರಧಾರಾ ನದಿಯಲ್ಲಿ ನೀರು ಪ್ರವಾಹದ ರೀತಿಯಲ್ಲಿ ಹರಿದು ಬರುತ್ತಿದ್ದು, ನದಿಯ ಒಡಲು ಪೂರ್ಣ ಪ್ರಮಾಣದಲ್ಲಿ ತುಂಬಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.