ADVERTISEMENT

ಕುದ್ಮುಲ್ ರಂಗ ರಾವ್‌ ಸಮಾಧಿ ಅಭಿವೃದ್ಧಿಗೆ ₹ 3 ಕೋಟಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 15:37 IST
Last Updated 29 ಜೂನ್ 2022, 15:37 IST
ಕುದ್ಮುಲ್‌ ರಂಗ ರಾವ್‌ ಅವರ ಸಮಾಧಿಗೆ ವೇದವ್ಯಾಸ ಕಾಮತ್‌ ಅವರು ಬುಧವಾರ ಗೌರವ ಸಲ್ಲಿಸಿದರು
ಕುದ್ಮುಲ್‌ ರಂಗ ರಾವ್‌ ಅವರ ಸಮಾಧಿಗೆ ವೇದವ್ಯಾಸ ಕಾಮತ್‌ ಅವರು ಬುಧವಾರ ಗೌರವ ಸಲ್ಲಿಸಿದರು   

ಮಂಗಳೂರು: ‘ಕುದ್ಮುಲ್ ರಂಗ ರಾವ್‌ ‌ಬದುಕು ಮುಂದಿನ ಪೀಳಿಗೆಯವರಿಗೆ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಅವರ ಸಮಾಧಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಕಾಮಗಾರಿಗೆ ₹ 3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕೆಲಸಕ್ಕೆ ಚಾಲನೆ ನೀಡಲಾಗುವುದು’ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.

ಕುದ್ಮುಲ್ ರಂಗ ರಾವ್ ಅವರ 163ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬಿಜೆಪಿಯ ಮಂಗಳೂರು ನಗರ ದಕ್ಷಿಣ ಘಟಕದ ಎಸ್. ಸಿ ಮೋರ್ಚಾ ಹಾಗೂ ಕುದ್ಮುಲ್ ರಂಗ ರಾವ್ ಶಿಕ್ಷಣ ಟ್ರಸ್ಟ್ ವತಿಯಿಂದ ಬಾಬುಗುಡ್ಡೆಯಲ್ಲಿರುವ ಅವರ ಸಮಾಧಿಯ ಬಳಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಂಗ ರಾವ್‌ ಅವರು ಸಮಾಜದಲ್ಲಿರುವ ಅಸಮಾನತೆಯನ್ನು ಮೆಟ್ಟಿ ನಿಂತು ದಲಿತ ಸಮುದಾಯದ ಶ್ರೇಯಸ್ಸಿಗಾಗಿ ದುಡಿದವರು.ಅಸ್ಪೃಶ್ಯತೆ ನಿವಾರಣೆ ವಿಚಾರದಲ್ಲಿ ಅವರಿಂದ ಮಹಾತ್ಮ ಗಾಂಧಿ ಅವರೇ ಪ್ರೇರಣೆ ಪಡೆದಿದ್ದರು. ಅವರ ಜಯಂತಿ ಆಚರಣೆಯನ್ನು ಪಾಲಿಕೆಯ ವತಿಯಿಂದಲೇ ಆಯೋಜಿಸಲು ತೀರ್ಮಾನಿಸಲಾಗಿದೆ’ ಎಂದರು‌.

ADVERTISEMENT

ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಮಂಗಳೂರು ನಗರ ಮಂಡಲ ಘಟಕದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ, ಮನೋಜ್ ಕುಮಾರ್, ಕುದ್ಮುಲ್ ರಂಗರಾವ್ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ಯಾಮ ಕರ್ಕೇರ, ಕಚ್ಚೂರು ಮಾಲ್ತಿದೇವಿ ಬಬ್ಬುಸ್ವಾಮಿ ಮೂಲಕ್ಷೇತ್ರದ ಅಧ್ಯಕ್ಷರಾದ ಶಿವಪ್ಪ ನಂತೂರು, ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾದ ವಿನಯ್ ನೇತ್ರಾ ದಡ್ಡಲಕಾಡು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.