ಮಂಗಳೂರು: ನಕಲಿ ದಾಖಲೆಗಳನ್ನುಸಲ್ಲಿಸಿ ‘ಸ್ಟ್ಯಾಂಡ್ ಆಪ್ ಇಂಡಿಯಾ’ ಯೋಜನೆಯಡಿ ₹ 56 ಲಕ್ಷ ಸಾಲ ಪಡೆದು ವಂಚಿಸಿದ ಬಗ್ಗೆ ಭಾರತೀಯ ಸ್ಟೇಟ್ ಬ್ಯಾಂಕಿನ ಬಂದರು ರಸ್ತೆ ಶಾಖೆಯ ವ್ಯವಸ್ಥಾಪಕರು ದೂರು ನೀಡಿದ್ದು, ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಆರೋಪಿಗಳಾದ ಸುಮಂಗಳಾ ವೈ., ಆಕೆಯ ಪತಿ ಯೋಗೇಶ ಆಚಾರ್ಯ ಮತ್ತು ಭಾಸ್ಕರ ಆಚಾರ್ಯ ಅವರು ಓಂ ಸಾಯಿ ಇಂಟರ್ಲಾಕ್ ಆ್ಯಂಡ್ ಸಾಯಿಲ್ ಬ್ರಿಕ್ಸ್ ಸಂಸ್ಥೆಯ ಹೆಸರಿನಲ್ಲಿ ವ್ಯಾಪಾರ ವಹಿವಾಟು ನಡೆಸುವ ಉದ್ದೇಶದಿಂದ ‘ಸ್ಟ್ಯಾಂಡ್ ಆಪ್ ಇಂಡಿಯಾ’ ಯೋಜನೆಯಡಿ 2023ರ ಫೆಬ್ರುವರಿ ತಿಂಗಳಿನಲ್ಲಿ ಕೊಟೇಷನ್ ಸಲ್ಲಿಸಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಲ್ಲಿಸುವ ಸಮಯ ನಕಲಿ ಇನ್ವಾಯ್ಸ್ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ಸಲ್ಲಿಸಿದ್ದರು. ಆರೋಪಿ ಭಾಸ್ಕರ ಆಚಾರ್ಯ ಅವರ ಹೆಸರಿನಲ್ಲಿ ‘ಉಷಾ ರಬ್ಬರ್’ ಹಸರಿನಲ್ಲಿ ಬ್ಯಾಂಕ್ ಆಫ್ ಬರೋಡಾದ ಮಡಿಕೇರಿ ಶಾಖೆಯಲ್ಲಿ ನಕಲಿ ಉಳಿತಾಯ ಖಾತೆಯನ್ನು ತೆರೆದಿದ್ದರು.
ನಮ್ಮ ಬ್ಯಾಂಕಿನಿಂದ 2023ರ ಏ. 20ರಂದು ಮತ್ತು ಮೇ 8 ರಂದು ಮಂಜೂರಾದ ಒಟ್ಟು ₹ 56 ಲಕ್ಷ ಸಾಲದ ಹಣವನ್ನು ಆರೋಪಿಗಳು ಸೇರಿಕೊಂಡು ಸ್ವಂತಕ್ಕೆ ಬಳಸಿ ವಂಚಿಸಿದ್ದಾರೆ’ ಎಂದು ಬ್ಯಾಂಕಿನ ವ್ಯವಸ್ಥಾಪಕರು ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.