ಮಂಗಳೂರು: ಇಲ್ಲಿನ ಶಕ್ತಿನಗರದ ಶಕ್ತಿ ವಸತಿಯುತ ಶಾಲೆಯು 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಿರುವ ಶಕ್ತಿ ಅಡ್ವಾನ್ಸ್ ಲರ್ನಿಂಗ್ (ಎಸ್ಎಎಲ್) ಪಠ್ಯಪುಸ್ತಕವನ್ನು ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಸಂಚಾಲಕ ಸಂಜೀತ್ ನಾಯಕ್, ‘ಎಸ್ಎಎಲ್ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಹೆಚ್ಚುವರಿ ಫೌಂಡೇಶನ್ ಕೋರ್ಸ್ ಆಗಿದೆ. ಇದು ಸಿಬಿಎಸ್ಇ ಪಠ್ಯಕ್ರಮದ ಜತೆಗೆ ಹೆಚ್ಚುವರಿಯಾಗಿ ಉಚಿತ ತರಬೇತಿ’ ಎಂದರು.
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಅನುಭವಿ ಪದವಿಪೂರ್ವ ಉಪನ್ಯಾಸಕರು ಈ ಅಧ್ಯಯನ ಸಾಮಗ್ರಿಯನ್ನು ಸಿದ್ಧಪಡಿಸಿದ್ದಾರೆ. ಎಸ್ಎಎಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತರಬೇತಿಯಾಗಿದ್ದು, ಇದು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಒಲಿಂಪಿಯಾಡ್ಗಳಿಗೆ ತಯಾರಿ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿನ ಸ್ವಯಂ ಪ್ರತಿಭೆ, ವೈಜ್ಞಾನಿಕ ಚಿಂತನೆ ಮತ್ತು ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಹೊರೆ ಇಲ್ಲದಂತೆ ವಿದ್ಯಾರ್ಥಿಗಳ ಗ್ರಹಣ ಮಟ್ಟ ಹಾಗೂ ತರಗತಿಗಳ ಮಟ್ಟಕ್ಕೆ ಅನುಗುಣವಾಗಿ ಬೋರ್ಡ್ ಮತ್ತು ಸುಧಾರಿತ ವಿಷಯಗಳನ್ನು ಕಲಿಯುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಎಎಲ್ ಶಾಲಾ ವಿದ್ಯಾರ್ಥಿಗಳಿಗೆ ಆರಂಭಗೊಂಡಿತ್ತು ಎಂದು ವಿವರಿಸಿದರು.
ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಈಗಾಗಲೇ ವಿದ್ಯಾರ್ಥಿಗಳಿಗೆ ನೇರ ತರಗತಿ ಹಾಗೂ ಆನ್ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಲೆಯಲ್ಲಿ ದಕ್ಷಿಣ ಕನ್ನಡ ಮಾತ್ರವಲ್ಲದೇ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅವರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೋರ್ಡ್ ತರಗತಿ ಮುಗಿದ ಬಳಿಕ ತರಬೇತಿ ಆಯೋಜಿಸಲಾಗುತ್ತದೆ ಎಂದು ಎಸ್ಎಎಲ್ನ ಸಂಚಾಲಕ ಡಾ. ದರ್ಶನ್ ರಾಜ್ ಸಿ.ಜೆ. ತಿಳಿಸಿದರು.
ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್, ಪಿಯು ಕಾಲೇಜಿನ ಪ್ರಭಾಕರ ಡಿ.ಎಸ್., ಪ್ರಧಾನ ಸಲಹೆಗಾರ ರಮೇಶ್ ಕೆ. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.