ADVERTISEMENT

ಪರಿಶಿಷ್ಟರ ಮೀಸಲು ಹಣ ಗ್ಯಾರಂಟಿಗೆ ಬಳಕೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 4:41 IST
Last Updated 27 ಫೆಬ್ರುವರಿ 2024, 4:41 IST
ಪ್ರತಿಭಟನೆಯಲ್ಲಿ ಸತೀಶ ಕುಂಪಲ ಮಾತನಾಡಿದರು. ವಿಕಾಸ ಪುತ್ತೂರು, ವಿನಯ ನೇತ್ರ, ಸುನೀತಾ, ಪೂರ್ಣಿಮಾ ಮತ್ತಿತರರು ಭಾಗವಹಿಸಿದ್ದರು
ಪ್ರತಿಭಟನೆಯಲ್ಲಿ ಸತೀಶ ಕುಂಪಲ ಮಾತನಾಡಿದರು. ವಿಕಾಸ ಪುತ್ತೂರು, ವಿನಯ ನೇತ್ರ, ಸುನೀತಾ, ಪೂರ್ಣಿಮಾ ಮತ್ತಿತರರು ಭಾಗವಹಿಸಿದ್ದರು   

ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ಬಳಸಿ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಇಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ಮುಖಂಡ ವಿನಯ ನೇತ್ರ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸರ್ಕಾರ ಅನುದಾನವನ್ನೂ ಕಡಿತಗೊಳಿಸಿದೆ. ಸಮಾಜ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಸುಮಾರು ₹ 11 ಸಾವಿರ ಕೋಟಿಗಳಷ್ಟು ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗಿದೆ. ಇದರಿಂದ ಪರಿಶಿಷ್ಟರಿಗೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ತನ್ನ ಘೋರಿಯನ್ನು ತಾನೇ ತೋಡಿಕೊಳ್ಳುತ್ತಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ, ‘ತಮ್ಮನ್ನು ದಲಿತ ಪರ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನ ಶೇ 2.5ರಷ್ಟನ್ನೂ ದಲಿತರ ಕಾರ್ಯಕ್ರಮಗಳಿಗೆ ಮೀಸಲಿಡದೇ ಅನ್ಯಾಯ ಮಾಡಿದ್ದಾರೆ. ಬೆಳಗಾವಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಅಪಮಾನಿಸಿದವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ರಾಜ್ಯದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸೊಲ್ಲೆತ್ತಿಲ್ಲ. ಗ್ಯಾರಂಟಿ ಕಾರ್ಯಕ್ರಮಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಇಲ್ಲದಂತಾಗಿದೆ’ ಎಂದರು.

ADVERTISEMENT

ವಿಕಾಸ್ ಪುತ್ತೂರು, ನಿತಿನ್ ಕುಮಾರ್‌, ನಂದನ್‌ ಮಲ್ಯ, ಜಗನ್ನಾಥ ಬೆಳುವಾಯಿ, ಪೂರ್ಣಿಮಾ, ಉಪಮೇಯರ್‌ ಸುನೀತಾ ಮತ್ತಿತರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.