ADVERTISEMENT

ಶ್ರೀಲಂಕಾದಲ್ಲಿ ಯೋಜನೆ ಮಾದರಿ ಅನುಷ್ಠಾನಕ್ಕೆ ಸಹಮತ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಯನ ಮಾಡಲು ಶ್ರೀಲಂಕಾದ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 16:28 IST
Last Updated 23 ಜನವರಿ 2025, 16:28 IST
ಶ್ರೀಲಂಕಾದ ಪ್ರತಿನಿಧಿಗಳು ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಿದರು
ಶ್ರೀಲಂಕಾದ ಪ್ರತಿನಿಧಿಗಳು ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಿದರು   

ಉಜಿರೆ: ಗ್ರಾಮೀಣ ಭಾರತವೇ ನೈಜ ಭಾರತದ ಪ್ರತಿಬಿಂಬವಾಗಿದೆ. ಆದುದರಿಂದಲೇ ರಾಷ್ಟçಪಿತ ಮಹಾತ್ಮಾಗಾಂಧೀಜಿ ಗ್ರಾಮರಾಜ್ಯದ ಪ್ರಗತಿ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಅವರು ಸಹಕಾರಿ ಚಳವಳಿ ಮೂಲಕ ದೇಶದ ಪ್ರಗತಿಗೆ ಆದ್ಯತೆ ನೀಡಿದರು.

ಉಜಿರೆ: ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲದ ಸದ್ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದ ಪ್ರಗತಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು 1982ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾರಂಭಿಸಿದ್ದು, ಯಶಸ್ವಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ ಬಂದ 38 ಮಂದಿ ‘ಲಂಕಾ ಮೈಕ್ರೊ ಫೈನಾನ್ಸ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್’ ಸದಸ್ಯರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.

ADVERTISEMENT

ಅಭಿವೃದ್ಧಿ ಮತ್ತು ಪ್ರಗತಿ ಸಾಧಿಸಲು ಎಲ್ಲರಿಗೂ ಸಮಾನ ಅವಕಾಶವಿದೆ. ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಪ್ರಗತಿಯ ಪಾಲುದಾರರು. ಜನರ ಸಕ್ರಿಯ ಸಹಕಾರ ಮತ್ತು ಸಹಭಾಗಿತ್ವದಿಂದ ಯೋಜನೆ ಯಶಸ್ವಿಯಾಗಿದೆ. ಜನಸಾಮಾನ್ಯರ ಬೇಡಿಕೆಗಳಿಗೆ ಅನುಗುಣವಾಗಿ ಕಿರು ಆರ್ಥಿಕ ಯೋಜನೆಯನ್ನು ಸ್ವ-ಸಹಾಯ ಸಂಘಗಳ ಮೂಲಕ ಬಿ.ಸಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಇಂದು ಗ್ರಾಮೀಣ ಜನರ ಜೀವನಶೈಲಿ ಸುಧಾರಣೆಯಾಗಿದ್ದುಮ ಅವರ ಮಕ್ಕಳೆಲ್ಲ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಯೋಜನೆಯ ಎಲ್ಲ ವ್ಯವಹಾರಗಳು, ಕಾರ್ಯಕ್ರಮಗಳು ಪಾರದರ್ಶಕವಾಗಿದ್ದು ಯಾರು ಬೇಕಾದರೂ ಇದನ್ನು ಅನುಸರಿಸಬಹುದು. ಶ್ರೀಲಂಕಾದಲ್ಲಿ ಯೋಜನೆಯ ಮಾದರಿ ಅನುಷ್ಠಾನಗೊಳಿಸಲು ಪೂರ್ಣ ಒಪ್ಪಿಗೆ ಇದೆ. ಬೇಕಾದ ಮಾಹಿತಿ, ಅನುಭವ, ಮಾರ್ಗದರ್ಶನ ನೀಡಲಾಗುವುದು. ಶ್ರೀಲಂಕಾ ಸಣ್ಣ ದೇಶವಾದುದರಿಂದ ಅಲ್ಲಿ ಯೋಜನೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಹೇಮಾವತಿ ವೀ.ಹೆಗ್ಗಡೆ ಅವರ ನೇತೃತ್ವದಲ್ಲಿ ಜ್ಞಾನದೀಪ ಮತ್ತು ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣವಾಗಿದೆ. ಅವರು ವ್ಯವಹಾರ ಪರಿಣತರಾಗಿ, ಜನಪ್ರತಿನಿಧಿಗಳಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.

‘ಲಂಕಾ ಮೈಕ್ರೊ ಫೈನಾನ್ಸ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್’ ಅಧ್ಯಕ್ಷ ವಾಸಂತ ಗುಣವರ್ಧನ ಮಾತನಾಡಿ, ಶ್ರೀಲಂಕಾದಲ್ಲಿ ಇದೇ ಮಾದರಿ ಅನುಷ್ಠಾನಗೊಳಿಸಲು ಹೆಗ್ಗಡೆ ಅವರ ಅನುಮತಿ ಕೋರಿದರು.

ಶ್ರೀಲಂಕಾದ ಡೆಗಿರಿ ದುಲಾಂಗ ಚಮೀರ, ಮಿಥಿರಾಮ್ ಚಾಮಿಕ ಮಲ್‌ಕಾಂತಿ ರಾಣಸಿಂಘ, ಕನಗರತ್ನಂ ಲಕ್ಷ್ಮಣ್‌ ಈರಜ್, ಎಸ್.ಪಿ.ಬೆನಿತಾಸ್, ರಾಮಸಾಮಿ ರಾಜೇಶ್‌ಖನ್ನಾ ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಯೋಜನೆಯ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.

ಹೇಮಾವತಿ ವೀ.ಹೆಗ್ಗಡೆ ಭಾಗವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಪೈ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶೀಕ ನಿರ್ದೇಶಕ ಆನಂದ ಸುವರ್ಣ ವಂದಿಸಿದರು. ನಿರ್ದೇಶಕ ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು
ಡಿ.ವೀರೇಂದ್ರ ಹೆಗ್ಗಡೆ ಜತೆಗೆ ಶ್ರೀಲಂಕಾದ ಪ್ರತಿನಿಧಿಗಳು
ಶ್ರೀಲಂಕಾದ ಪ್ರತಿನಿಧಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.