ಮಂಗಳೂರು: ಮತದಾನದ ದಿನದಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದು ನಿಜವಾದ ದೇಶ ಭಕ್ತಿ ಎಂದು ಬ್ರಿಗೇಡಿಯರ್ ಐ.ಎನ್. ರೈ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಆಕಾಶವಾಣಿ ಮಂಗಳೂರು ಕೇಂದ್ರ ರೋಟರ್ಯಾಕ್ಟ್ ಮಂಗಳೂರು ಸಿಟಿ ಸಹಯೋಗದಲ್ಲಿ ಗುರುವಾರ ನಗರದ ಕದ್ರಿ ಉದ್ಯಾನದಲ್ಲಿ ಆಯೋಜಿಸಿದ್ದ ಮತದಾನದೆಡೆಗೆ ‘ವಾಕ್ ವಿತ್ ಟಾಕ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಗಡಿಯಲ್ಲಿ ಪ್ರಾಣಾರ್ಪಣೆ ಮಾಡುವುದು ಮಾತ್ರ ದೇಶಭಕ್ತಿ ಅಲ್ಲ. ಮತದಾನದ ಮೂಲಕ ಬಲಿಷ್ಠ ಸರ್ಕಾರ ರಚಿಸಿ, ದೇಶದ ರಕ್ಷಣೆ, ಭದ್ರತೆ, ಅಭಿವೃದ್ಧಿಗೆ ಕಾರಣರಾಗುವುದು ಕೂಡ ರಾಷ್ಟ್ರಭಕ್ತಿಯಾಗಿದೆ. ಎಲ್ಲರೂ ಮತದಾನ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿಯಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ನಟ ದೇವದಾಸ್ ಕಾಪಿಕಾಡ್, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಸೆಲ್ವಮಣಿ ಆರ್., ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಉಷಾಲತಾ ಸರಪಾಡಿ, ಲೆಕ್ಕ ಪರಿಶೋಧಕ ಶಾಂತಾರಾಮ ಶೆಟ್ಟಿ, ರೋಟರ್ಯಾಕ್ಟ್ ಅಧ್ಯಕ್ಷ ಗಣೇಶ್, ಕಲಾವಿದೆ ಶಬರಿ ಗಾಣಿಗ, ಕ್ರೀಡಾ ಸಾಧಕ ಪ್ರದೀಪ್ ಆಚಾರ್ಯ, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ರೇಡಿಯೊ ಕೇಳುಗರ ಸಂಘದ ಅಧ್ಯಕ್ಷ ರಾಮರಾವ್ ಇದ್ದರು. ಕಾರ್ಯಕ್ರಮ ಸಂಯೋಜಕ ಡಾ.ಸದಾನಂದ ಪೆರ್ಲ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.