ಸುಬ್ರಹ್ಮಣ್ಯ: ‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿ ಮಾದರಿಗೆ ಸರ್ಕಾರ ಅನುಮೋದನೆ ನೀಡಿದೆ. ಸಿಬ್ಬಂದಿ ಮಾದರಿ ಇಲ್ಲದ ಕಾರಣ ಕಾಯಮಾತಿ ಪ್ರಕ್ರಿಯೆ ನಡೆಸಲು ಕಷ್ಟವಾಗಿತ್ತು. ಶೀಘ್ರದಲ್ಲಿ ಹಂಗಾಮಿ ನೌಕರರಿಗೆ ಕಾಯಮಾತಿ ಆಗಲಿದೆ’ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು.
ಸರ್ಕಾರದಿಂದ ಅನುಮೋದನೆಯಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ ಸಿಬ್ಬಂದಿ ಮಾದರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವೃತ್ತಿ ಅತ್ಯಂತ ಶ್ರೇಷ್ಠವಾದುದು. ವೃತ್ತಿಯ ಶ್ರೇಷ್ಠತೆ ಕಾಪಾಡುವುದು ಅವಶ್ಯಕ. ಉತ್ತಮ ಕಾರ್ಯವೆಸಗುವ ಮೂಲಕ ನೌಕರರು ವೃತ್ತಿಯ ಪಾವಿತ್ರ್ಯ ಉಳಿಸಿಕೊಳ್ಳಬೇಕು ಎಂದರು.
‘ಆಡಳಿತ ವ್ಯವಸ್ಥೆಗಳನ್ನು ಸರಿಯಾಗಿ ಮಾಡಿಕೊಂಡು ಹೋದರೆ ಅಭಿವೃದ್ಧಿ ಸಾಧ್ಯ. ದೇವರ ಆಶೀರ್ವಾದದಿಂದ ದೇವಳದ ನೌಕರರ ಮಾದರಿ ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದೆ. ವಿದ್ಯಾರ್ಹತೆಗೆ ಅನುಗುಣವಾಗಿ ಸಿಬ್ಬಂದಿ ಮಾದರಿ ತಯಾರಾಗಿದ್ದು ನೌಕರರಿಗೆ ಒಳಿತಾಗಿದೆ. ಆಡಳಿತಾತ್ಮಕ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸೇವೆ ಮತ್ತು ಕರ್ತವ್ಯ ಉತ್ಕೃಷ್ಟವಾಗಿರಬೇಕು’ ಎಂದರು.
ಸಚಿವ ಎಸ್. ಅಂಗಾರ ಅವರನ್ನು ದೇವಳದ ನೌಕರರ ಪರವಾಗಿ ಸನ್ಮಾನಿಸಲಾಯಿತು. ದೇವಳದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಸಚಿವರನ್ನು ಗೌರವಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ. ಭಟ್, ಶ್ರೀವತ್ಸ, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ್ ಮರ್ದಾಳ, ಮನೋಜ್ ಸುಬ್ರಹ್ಮಣ್ಯ ಇದ್ದರು. ಯೋಗೀಶ್ ಎಂ. ವಿಟ್ಲ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.