ADVERTISEMENT

ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆ ಮತ್ತು ತಪ್ಪು ಅಭಿಪ್ರಾಯಗಳಿವೆ: ಅಶೋಕ್ ಕುಮಾರ್ ರೈ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:45 IST
Last Updated 2 ಜೂನ್ 2025, 13:45 IST
ಉಪ್ಪಿನಂಗಡಿ ಸಮೀಪ ಬಜತ್ತೂರು ಸರ್ಕಾರಿ ದಕಜಿಪಂ ಶಾಲೆಯಲ್ಲಿ ಬಸ್ ವ್ಯವಸ್ಥೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು
ಉಪ್ಪಿನಂಗಡಿ ಸಮೀಪ ಬಜತ್ತೂರು ಸರ್ಕಾರಿ ದಕಜಿಪಂ ಶಾಲೆಯಲ್ಲಿ ಬಸ್ ವ್ಯವಸ್ಥೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು   

ಉಪ್ಪಿನಂಗಡಿ: ಸಮಾಜದಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆ ಮತ್ತು ತಪ್ಪು ಅಭಿಪ್ರಾಯಗಳಿವೆ. ಸರ್ಕಾರಿ ಶಾಲೆಯಲ್ಲಿ ಲಭಿಸುವ ಶಿಕ್ಷಣ ಖಾಸಗಿ ಶಾಲೆಯಲ್ಲಿ ಲಭಿಸದು. ಹೀಗಾಗಿ ಶಿಕ್ಷಣಕ್ಕೆ ಆಸಕ್ತಿಯೇ ಮುಖ್ಯ ಹೊರತು ಶ್ರೀಮಂತಿಕೆ ಅಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬಜತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಸಮನ್ವಯ ಟ್ರಸ್ಟ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಸಂಕಲ್ಪ ದಿನದ ಸಂಭ್ರಮ, ಶಾಲಾ ವಾಹನ ಮತ್ತು ಎಲ್‌ಕೆಜಿ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.

ಕೆಪಿಎಸ್ ಸ್ಕೂಲ್ ಮಂಜೂರಾತಿಗೆ ಪ್ರಯತ್ನಿಸುವೆ: ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಣ ಸಮನ್ವಯ ಟ್ರಸ್ಟ್‌ಗೆ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಮಂಜೂರು ಮಾಡುವಂತೆ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯಿಸಿ ಈ ಶಾಲೆ ಕೆಪಿಎಸ್ ಶಾಲೆ ಮಾಡುವುದಕ್ಕೆ ಅರ್ಹತೆ ಹೊಂದಿದೆ. ಮಂಜೂರಾತಿ ಆಗಬೇಕಾದ ದಾಖಲೆಯನ್ನು ಸಲ್ಲಿಸಿ ಶಿಕ್ಷಣಾಧಿಕಾರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಾಡಿ. ಬಳಿಕ ಸರ್ಕಾರಕ್ಕೆ ಒತ್ತಡ ತಂದು ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.

ADVERTISEMENT

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಮಾತನಾಡಿ, ಇಲಾಖೆಯ ವತಿಯಿಂದ ಆಗಬೇಕಾದ ಕೆಲಸವನ್ನು ಮಾಡುವುದಾಗಿ ತಿಳಿಸಿದರು.

ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕಿನಲ್ಲಿ ಪ್ರಥಮ, ಜಿಲ್ಲೆಗೆ ದ್ವಿತೀಯ:

ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸಲು ಬಸ್ ಯೋಜನೆಯನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರ ಮಾಡಲಾಗಿದೆ. ಇಲ್ಲಿ 5 ವರ್ಷದ ಹಿಂದೆಯೇ ಯುಕೆಜಿ ತರಗತಿಯನ್ನು ಆರಂಭಿಸಿದ್ದು, ಈ ವರ್ಷ 25 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಶಿಕ್ಷಣ ಸಮನ್ವಯ ಟ್ರಸ್ಟ್‌ನ ವಿಲ್ಫ್ರೆಡ್ ಡಿಸೋಜ ತಿಳಿಸಿದರು.

ಪುತ್ತೂರು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಆಲಾಜೆ ಬೆದ್ರೋಡಿ, ಸಾಮಾಜಿಕ ಕಾರ್ಯಕರ್ತ, ಪಂಚಾಯತ್ ರಾಜ್ ತಜ್ಞ ವಿಲ್ಫ್ರೆಡ್ ಡಿಸೋಜ ಮಾತನಾಡಿದರು.

ಬಜತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಮಾಲಾ ಬೆದ್ರೋಡಿ, ಸದಸ್ಯರಾದ ಉಮೇಶ್ ಓಡ್ರಪಾಲ್, ಪ್ರೆಸಿಲ್ಲಾ ಬೆದ್ರೋಡಿ, ರತ್ನಾ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಬಜತ್ತೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಯಶೋದಾ, ಕಾರ್ಯಾಧ್ಯಕ್ಷ ಸಿದ್ದಪ್ಪ ನಾಯ್ಕ್ ಬೆದ್ರೋಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ ಬಾರಿಕೆ, ಉಪಾಧ್ಯಕ್ಷ ಸರ್ಫರಾಜ್‌, ನವೀನ್ ವೇಗಸ್, ಡಾ.ರಾಜಾರಾಮ್, ಯು.ಟಿ. ತೌಸೀಫ್ ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆ.ವಿ.ಸ್ವಾಗತಿಸಿ, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ವಳಾಲು ವಂದಿಸಿದರು. ಶಿಕ್ಷಕರಾದ ಮೋಹನ್ ಚಂದ್ರ, ಪವಿತ್ರಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.