ಮಂಗಳೂರು: ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಸ್ಥಾಪನೆಯಾಗಿರುವ ವಿಶೇಷ ಕಾರ್ಯಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಗಲಭೆ ನಿಗ್ರಹ ಗನ್ (ಆ್ಯಂಟಿ ರಯಟ್ ಗನ್) ಮತ್ತು ಸ್ಟನ್ ಶೆಲ್ (ಪ್ಲಾಸ್ಟಿಕ್ ಗುಂಡು) ಬಳಕೆ ಬಗ್ಗೆ ನೆಹರೂ ಮೈದಾನದಲ್ಲಿ ಬುಧವಾರ ತರಬೇತಿ ನೀಡಲಾಯಿತು.
ತರಬೇತಿಯ ಬಳಿಕ ಗಲಭೆ ನಿಯಂತ್ರಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು. ವಿಶೇಷ ಕಾರ್ಯಪಡೆ ಘಟಕದ ಕಾರ್ಯಾಚರಣೆ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ 95 ಮಂದಿ ಭಾಗವಹಿಸಿದ್ದರು.
ಗುಪ್ತವಾರ್ತೆ ವಿಭಾಗದ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗೆ ಗುಪ್ತ ಮಾಹಿತಿ ಸಂಗ್ರಹಿಸುವ ಕುರಿತು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿ ದ್ವೇಷ ಹರಡುವ ಹಾಗೂ ದ್ವೇಷ ಭಾಷಣಗಳ ಮಾಹಿತಿ ಸಂಗ್ರಹಿಸುವ ಕುರಿತು ಪರಿಣಾಮಕಾರಿ ತರಬೇತಿ ನೀಡಲಾಗಿದೆ. ವಿಶೇಷ ಕಾರ್ಯಪಡೆಯುವ ಕಾರ್ಯಾಚರಣೆಗೆ ಸಂಪೂರ್ಣ ಸನ್ನದ್ದವಾಗಿದೆ ಎಂದು ಕಾರ್ಯಪಡೆಯ ಮುಖ್ಯಸ್ಥರಾಗಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕೋಮು ಗಲಭೆಗಳ ಸಂದರ್ಭಗಳಲಿ ಉದ್ರಿಕ್ತರ ಗುಂಪನ್ನು ಚದುರಿಸಲು ಗಲಭೆ ನಿಗ್ರಹ ಗನ್ ಹಾಗೂ ಸ್ಟನ್ ಶೆಲ್ ಗಳು ಪರಿಣಾಮಕಾರಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಯಂತ್ರಣದ ಉದ್ದೇಶದಿಂದ ಸರ್ಕಾರ ಈ ವಿಶೇಷ ಕಾರ್ಯಪಡೆಯನ್ನು ರಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.