ಮಂಗಳೂರು: ‘ಸಿನಿಮಾ ಸಾಹಿತ್ಯಕ್ಕೆ ಭಾವನಾತ್ಮಕ ಶಕ್ತಿ ತುಂಬಿದ ಮಹಾನ್ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಎಂದು ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಪ್ರದೀಪ್ಕುಮಾರ ಕಲ್ಕೂರ ಹೇಳಿದರು.
ನಗರದ ಶಾರದಾ ವಿದ್ಯಾಲಯದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ‘ಎಸ್.ಪಿ.ಬಿ.ಗೆ ಶ್ರದ್ಧಾಂಜಲಿ’ಯಲ್ಲಿ ಅವರು ನುಡಿನಮನ ಸಲ್ಲಿಸಿದರು.
‘ನಮ್ಮ ತುಳು ಹಾಗೂ ಕೊಂಕಣಿ ಸಿನಿಮಾಗಳ ಸಾಹಿತ್ಯಕ್ಕೂ ತನ್ನ ಕಂಠಸಿರಿಯ ಮೂಲಕ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ’ ಎಂದರು.
‘ಅವರು, ಸಂಗೀತ ಸಾಮ್ರಾಜ್ಯದ ಗಾನ ಗಂಧರ್ವ. ತುಳುವಿನಲ್ಲಿ ಅಮೃತ ಸೋಮೇಶ್ವರ, ಸೀತಾರಾಮ ಕುಲಾಲ್, ವಿಜಯಕುಮಾರ್ ಕೊಡಿಯಾಲಬೈಲ್ ಸಹಿತ ಅನೇಕ ಸಾಹಿತಿಗಳ ಸಾಹಿತ್ಯವನ್ನು ಹಾಡಿದ್ದಾರೆ’ ಎಂದರು.
ಹಿರಿಯ ಗಾಯಕ ಚರಣ್ ಕುಮಾರ್ ಎಸ್.ಪಿ.ಬಿ ಸ್ಮರಣೆ ಮಾಡಿದರು. ಎಸ್.ಪಿ.ಬಿ ಎಂದೇ ಖ್ಯಾತರಾದ ಗಾಯಕ ರವೀಂದ್ರ ಪ್ರಭು ವಿವಿಧ ಹಾಡುಗಳನ್ನು ಹಾಡುವ ಮೂಲಕ ‘ಗಾನ ನಮನ’ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ರಂಗಕರ್ಮಿ ವಿ.ಜಿ.ಪಾಲ್, ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಸಂಗೀತ ನಿರ್ದೇಶಕ ವಸಂತ ಕದ್ರಿ, ಮುರಳೀಧರ ಕಾಮತ್, ಕಲಾವಿದ ತಮ್ಮ ಲಕ್ಷ್ಮಣ್, ಚಿತ್ರ ನಿರ್ಮಾಪಕ ಸುಧಾಕರ ಕುದ್ರೋಳಿ, ಜಿ.ಕೆ.ಭಟ್ ಸೇರಾಜೆ, ತಾರಾನಾಥ ಹೊಳ್ಳ, ಚಂದ್ರಶೇಖರ ಶೆಟ್ಟಿ, ನವಗಿರಿ ಗಣೇಶ್, ಅಭಿಜಿತ್ ಶೆಣೈ, ದಯಾನಂದ ಕಟೀಲ್, ರಜನಿ ಶೆಣೈ, ನಾಗರಾಜ ಬಸ್ರೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.