ಮಂಗಳೂರು: ತುಳು ಲಿಪಿಗೂ ಒಂದು ದಿನವನ್ನು ನಿಗದಿ ಮಾಡಿದ ಈ ದಿನ, ತುಳುನಾಡಿನ ಸಮಸ್ತ ಜನರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಹೆಮ್ಮೆಯ ದಿನ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಐಲೇಸಾ ಮತ್ತು ತುಳುವರ್ಲ್ಡ್ ಕುಡ್ಲ ಆಶ್ರಯದಲ್ಲಿ ತುಳುಭವನದಲ್ಲಿ ಶನಿವಾರ ಡಾ. ವೆಂಟಕರಾಜ ಪುಣಿಂಚತ್ತಾಯ ಅವರ 84ನೇ ಜನ್ಮ ದಿನದ ಅಂಗವಾಗಿ ‘ಪು.ವೆಂ.ಪು ನೋತ್ತೊಂಜಿ ನೆಂಪು’ ಮತ್ತು ‘ತುಳುಲಿಪಿ ದಿನೊಕು ಲೆಪ್ಪು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಮಾತನಾಡಿ, ‘ತುಳು ಲಿಪಿ ಮತ್ತು ಸಾಹಿತ್ಯಕ್ಕೆ ಡಾ. ಪುಂಡೂರು ವೆಂಕಟರಾಜ್ ಪುಣಿಂಚಿತ್ತಾಯ (ಪು.ವೆಂ.ಪು.) ಅವರ ಕೊಡುಗೆ ಅಪಾರ. ಅವರ ಜನ್ಮದಿನವನ್ನು ತುಳು ಲಿಪಿ ದಿನವಾಗಿ ಆಚರಣೆ ಮಾಡುವುದು ಅವರಿಗೆ ನಾವು ನೀಡಬಹುದಾದ ಅತಿ ದೊಡ್ಡ ಗೌರವ’ ಎಂದು ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಸಾಯಿಗೀತಾ ಅವರು, 101 ಕವಿಗಳು ಬರೆದ ಭಾವಗೀತೆ ಪುಸ್ತಕ ಬಿಡುಗಡೆಗೊಳಿಸಿದರು. ಗಾಯಕ ಕೃಷ್ಣ ಕಾರಂತ ಮತ್ತು ತುಳು ಲಿಪಿ ಸಂಶೋಧಕ ಕೃಷ್ಣಯ್ಯ ಅವರಿಗೆ ಪುವೆಂಪು ಗೌರವ ನೀಡಲಾಯಿತು. ಕೇರಳ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಎಸ್. ಪುಣಿಂಚಿತ್ತಾಯ ಸನ್ಮಾನಿಸಿದರು. ಡಾ.ಪಾದೆಕಲ್ಲು ವಿಷ್ಣು ಭಟ್, ಪು.ವೆಂ.ಪು. ನೆಂಪು ವಿಷಯದಲ್ಲಿ ಮಾತನಾಡಿದರು.
ಮೇಯರ್ ದಿವಾಕರ ಪಾಂಡೇಶ್ವರ, ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್ಬೈಲ್, ಎಂಆರ್ಪಿಎಲ್ ಡೆಪ್ಯುಟಿ ಜನರಲ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ವಿಜಯರಾಜ್ ಪುಣಿಂಚತ್ತಾಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕ ಡಾ. ಮಾಧವ್ ಎಂ.ಕೆ., ಪತ್ರಕರ್ತ ಎಸ್.ಆರ್. ಬಂಡಿಮಾರ್ ಅತಿಥಿಗಳಾಗಿದ್ದರು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಐಲೇಸಾ ಬೆಂಗಳೂರು ಸಂಚಾಲಕ ರಮೇಶ್ಚಂದ್ರ, ತುಳುವರ್ಲ್ಡ್ ಅಧ್ಯಕ್ಷ ರಾಜೇಶ್ ಕೃಷ್ಣ ಆಳ್ವ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಆಕಾಶ್ರಾಜ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.