ಮುಡಿಪು: ಜಗತ್ತಿನ ಅತಿಶ್ರೇಷ್ಠ ಪ್ರತಿಷ್ಠಿತ ಜರ್ನಲ್ಗಳಲ್ಲಿ ಉನ್ನತ ಮಟ್ಟದ ಸಂಶೋಧನಾ ಪ್ರಬಂಧ ಪ್ರಕಟಿಸಿದ ದೇಶಗಳ ಪೈಕಿ ಭಾರತ 3ನೇ ಸ್ಥಾನದಲ್ಲಿದೆ. ವಿಶ್ವದ 3ನೇ ದೇಶ ಭಾರತ. ಭಾರತೀಯ ವಿಜ್ಞಾನಿಗಳಿಗೆ ಪ್ರಪಂಚದಲ್ಲಿ ಎಲ್ಲ ಭಾಗದಲ್ಲಿ ಒಂದು ಉತ್ತಮ ಸ್ಥಾನಮಾನವಿದ್ದು, ಎಲ್ಲರೂ ಗುರುತಿಸಲ್ಪಡುತ್ತಾರೆ ಎಂದು ಮದ್ರಾಸ್ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಭೌತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಮಚಂದ್ರ ರಾವ್ ಎಂ.ಎಸ್. ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಭೌತ ವಿಜ್ಞಾನ ವಿಭಾಗವು ಆಯೋಜಿಸಿದ್ದ ‘ಫಿಸಿಕ್ಸ್ ಆಫ್ ಮೆಟಿರಿಯಲ್ಸ್ ಅಂಡ್ ನ್ಯಾನೋ ಟೆಕ್ನಾಲಜಿ' ಕುರಿತು ಮೂರು ದಿನಗಳು ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನ್ಯಾನೋ, ತಂತ್ರಜ್ಞಾನ ವಿಜ್ಞಾನದ ಶಾಖೆಗಳಲ್ಲಿನ ಅಡೆತಡೆ ತೆಗೆದು ಹಾಕಿದೆ. ಅದು ಸಂಶೋಧನೆಯ ಅಂತರ- ಶಿಸ್ತಿನ ಕ್ಷೇತ್ರಕ್ಕೆ ದಾರಿ ಮಾಡಿಕೊಟ್ಟಿದೆ. ನಮ್ಮಲ್ಲಿ ಬಹಳಷ್ಟು ಪ್ರತಿಭೆಗಳಿವೆ. ಅವಕಾಶಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಜ್ಞಾನವನ್ನು ಸಮಾಜಕ್ಕೆ ಉಪಯೋಗವಾಗುವಂತೆ ಬಳಸಿಕೊಳ್ಳಬೇಕಿದೆ. ಐಐಟಿ ಮದ್ರಾಸ್ ಕೂಡಾ ಈಗ ಇದೇ ಉದ್ದೇಶದಿಂದ ಸಂಶೋಧನಾ ಪಾರ್ಕ್ ಸ್ಥಾಪಿಸಿದೆ ಎಂದು ನುಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಂಶೋಧನೆಗಿಂತಲೂ ಸಂಶೋಧನಾ ಫಲಿತಾಂಶ ಏನು ಎಂಬುದು ಅತಿ ಮುಖ್ಯ. ಮಂಗಳೂರು ವಿವಿಯಲ್ಲಿ ಸಂಶೋಧನೆಗೆ ಆದ್ಯತೆ ನೀಡಲಾಗಿದೆ. ಸಂಶೋಧನಾ ಹಕ್ಕಿನ(ಪೇಟೆಂಟ್) ರಕ್ಷಣೆಗಾಗಿ ಪೇಟೆಂಟ್ ಸೆಲ್ ಆರಂಭಿಸಲಾಗುವುದು. ಅದಕ್ಕಾಗಿ ವಿಶ್ವವಿದ್ಯಾಲಯ ತಾಂತ್ರಿಕ ಹಾಗೂ ಆರ್ಥಿಕವಾಗಿಯೂ ಸಹಕರಿಸಲಿದೆ. ಕರ್ನಾಟಕ ಸ್ಟೇಟ್ ಯುನಿವರಸಿಟಿ ರ್ಯಾಂಕಿಂಗ್ ಫ್ರೇಮ್ ವರ್ಕ್ನಿಂದ ಮಂಗಳೂರು ವಿವಿ 6ನೇ ರ್ಯಾಂಕ್ ಪಡೆದುಕೊಂಡಿರುವುದು ವಿವಿ ಹೆಗ್ಗಳಿಕೆ ಎಂದು ಹೇಳಿದರು.
ಸೂರತ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರಮೇಶನ್ ಅಂಡ್ ಟೆಕ್ನಾಲಜಿ ನಿರ್ದೇಶ ಜೆ.ಎಸ್. ಭಟ್ ಸಮ್ಮೇಳನ ಉದ್ಘಾಟಿಸಿದರು.
ಕುಲಸಚಿವ ಪ್ರೊ. ಎ.ಎಂ. ಖಾನ್, ಪರೀಕ್ಷಾಂಗ ಕುಲಸಚಿವ ಪ್ರೊ. ರವೀಂದ್ರಾಚಾರಿ ಹಾಗೂ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಪ್ರೊ. ಗಣೇಶ್ ಸಂಜೀವ್ ಇದ್ದರು.
ವಿಭಾಗ ಮುಖ್ಯಸ್ಥ, ಸಮ್ಮೇಳನ ಅಧ್ಯಕ್ಷ ಪ್ರೊ. ಗೋಪಾಲಕೃಷ್ಣ ನಾಯಕ್ ಸ್ವಾಗತಿಸಿದರು. ಶಲ್ಮಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಘಟಕ ಡಾ. ದೇವೇಂದ್ರಪ್ಪ ಎಚ್. ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.