ADVERTISEMENT

ಬೆಳ್ತಂಗಡಿ| ಲಿಖಿತ ಭರವಸೆ: ಉಪವಾಸ ಸತ್ಯಾಗ್ರಹ ಅಂತ್ಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 6:20 IST
Last Updated 29 ಮಾರ್ಚ್ 2023, 6:20 IST
ಶೇಖರ ಲಾಯಿಲ ಅವರ ಜೊತೆ ಮಾತುಕತೆ ನಡೆಸುತ್ತಿರುವ ತಹಶೀಲ್ದಾರ್ ಸುರೇಶ್ ಕುಮಾರ್
ಶೇಖರ ಲಾಯಿಲ ಅವರ ಜೊತೆ ಮಾತುಕತೆ ನಡೆಸುತ್ತಿರುವ ತಹಶೀಲ್ದಾರ್ ಸುರೇಶ್ ಕುಮಾರ್   

ಬೆಳ್ತಂಗಡಿ: ‘ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ’ ಎಂದು ಆರೋಪಿಸಿ ಮತ್ತು ಅವುಗಳನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸೋಮವಾರದಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿದ್ದ ಸಿಪಿಎಂ ಮುಖಂಡ ಶೇಖರ ಲಾಯಿಲ ಅವರು ತಾಲ್ಲೂಕು ಆಡಳಿತ ನೀಡಿದ ಲಿಖಿತ ಭರವಸೆಯ ಬಳಿಕ ಸತ್ಯಾಗ್ರಹವನ್ನು ಕೊನೆಗೊಳಿಸಿದರು.

‘ಮಾರ್ಚ್ 20ರಿಂದ ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು.
ಅಧಿಕಾರಿಗಳು ಸ್ಪಂದಿಸದ ಕಾರಣ ಸೋಮವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ಅವರು ಸೋಮವಾರ ರಾತ್ರಿಯೂ ಮುಂದುವರಿಸಿದರು. ಮಂಗಳವಾರ ಮಧ್ಯಾಹ್ನ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ಅವರು ಶೇಖರ್ ಲಾಯಿಲ ಅವರೊಂದಿಗೆ ಮಾತುಕತೆ ನಡೆಸಿದರಲ್ಲದೆ, ಲಿಖಿತ ರೂಪದಲ್ಲಿ ಹೋರಾಟಕ್ಕೆ ಸ್ಪಂದಿಸಿದರು.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಅಕ್ರಮ ಮರಳು ಗಣಿಗಾರಿಕೆಯನ್ನು ಗ್ರಾಮಕರಣಿಕರು ಸೇರಿದಂತೆ ಕಂದಾಯ ನಿರೀಕ್ಷಕರು ದಾಳಿ ನಡೆಸಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಲಿಖಿತ ಭರವಸೆಯನ್ನು ತಹಶೀಲ್ದಾರ್‌ ನೀಡಿದರು.

ADVERTISEMENT

ಕಳಪೆಮಟ್ಟದ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಅನುಷ್ಠಾನಾಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮನವಿ ಸಲ್ಲಿಸುವ ಬಗ್ಗೆ ಲಿಖಿತ ಮಾಹಿತಿ ನೀಡಿದರು.

ತಾಲ್ಲೂಕಿನ ವಿವಿಧೆಡೆ ನಡೆಯು ತ್ತಿರುವ ಅಕ್ರಮಗಳ ಮಾಹಿತಿಯನ್ನು ಶೇಖರ್ ಲಾಯಿಲ ಅವರು ತಹಶೀಲ್ದಾರ್‌ಗೆ ನೀಡಿದರು. ಅಕ್ರಮಗಳನ್ನು ತಡೆಯಲು ವಿಫಲವಾದರೆ ಮತ್ತೊಮ್ಮೆ ಆಮರಣಾಂತ ಉಪವಾಸ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.