ADVERTISEMENT

ಮಂಗಳೂರು ವಿವಿ: ಯಕ್ಷಮಂಗಳಯಕ್ಷನಾಟ್ಯ ತರಬೇತಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:01 IST
Last Updated 11 ಮಾರ್ಚ್ 2023, 15:01 IST
ಮಂಗಳೂರು ವಿವಿಯಲ್ಲಿ ಯಕ್ಷನಾಟ್ಯ ತರಬೇತಿಯನ್ನು ಡಾ.ಪರಮೇಶ್ವರ ಉದ್ಘಾಟಿಸಿದರು
ಮಂಗಳೂರು ವಿವಿಯಲ್ಲಿ ಯಕ್ಷನಾಟ್ಯ ತರಬೇತಿಯನ್ನು ಡಾ.ಪರಮೇಶ್ವರ ಉದ್ಘಾಟಿಸಿದರು   

ಮುಡಿಪು: ‘ಯಕ್ಷಗಾನ ಕಲೆಯು ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವುದು ಉತ್ತಮ‌ ಬೆಳವಣಿಗೆ. ನಮ್ಮ ನಾಡಿನ, ಈ ಮಣ್ಣಿನ ಕಲೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರೊಂದಿಗೆ ಈ ಕಲೆಯ ಸಾಂಸ್ಕೃತಿಕ ರಾಯಭಾರಿಗಳಾಗೋಣ’ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಪರಮೇಶ್ವರ ಹೇಳಿದರು.‌

ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23ನೇ ಸಾಲಿನ ಯಕ್ಷಮಂಗಳ ನಾಟ್ಯ ತರಬೇತಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನವು ಕುಣಿತ, ಅಭಿನಯ, ಬಣ್ಣಗಾರಿಕೆ, ಸಂಗೀತ, ವೇಷಭೂಷಣ ಹೀಗೆ ಎಲ್ಲಾ ವಿಶೇಷತೆಯನ್ನು ಹೊಂದಿರುವ ಸಮ್ಮಿಳಿತ ಕಲೆ. ಯಕ್ಷಗಾನ ಕಲೆಯ ಬಗ್ಗೆ ವಿದ್ಯಾರ್ಥಿಗಳು, ಯುವ ಸಮುದಾಯದ ಆಸಕ್ತಿ ಹೆಚ್ಚಾಗಿದೆ. ಅಲ್ಲದೆ, ಯಕ್ಷಗಾನ ವಿಷಯದಲ್ಲಿ ಸಂಶೋಧನೆ, ಅಧ್ಯಯನಗಳು ನಡೆದು ಶೈಕ್ಷಣಿಕವಾಗಿಯೂ ಬೆಳೆಯುತ್ತಿದೆ ಎಂದು ಹೇಳಿದರು.

ADVERTISEMENT

ಯಕ್ಷಗಾನ ಗುರು ದೀವಿತ್ ಎಸ್. ಕೋಟ್ಯಾನ್ ಮಾತನಾಡಿ, ಯಕ್ಷಗಾನ ಜಾನಪದವೋ, ಶಾಸ್ತ್ರೀಯವೋ ಎಂಬ ಚರ್ಚೆಗಿಂತ ಈ ಕಲೆಯ ಸಂರಕ್ಷಣೆ ಮತ್ತು ಸಂಪ್ರದಾಯಬದ್ಧವಾಗಿ ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ‌ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ಡಾ.ಸತೀಶ್ ಕೊಣಾಜೆ ವಂದಿಸಿದರು. ವಿದ್ಯಾರ್ಥಿಗಳಾದ ಅಭಿರಾಮ್ ಪ್ರಾರ್ಥಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.