ಮಂಗಳೂರು: ಯುವ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆ. 23ರಂದು ಆಚರಿಸಲು ನಿರ್ಧರಿಸಲಾಗಿದೆ. ಈ ಪ್ರಯುಕ್ತ ‘ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಯಲ್ಲಿ ನಾರಾಯ ಗುರುಗಳ ಚಿಂತನೆಯ ಪಾತ್ರ’ ವಿಷಯದಲ್ಲಿ ಜಿಲ್ಲಾ ಹಾಗೂ 16 ಬ್ಲಾಕ್ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, 8ನೇ ತರಗತಿಯಿಂದ ಪಿಯುಸಿ, ದ್ವಿತೀಯ ಪಿಯುಸಿಯಿಂದ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಮುಕ್ತ ವಿಭಾಗ ಸೇರಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಜಿಲ್ಲಾ ಹಾಗೂ ಪ್ರತಿ ಬ್ಲಾಕ್ ಮಟ್ಟದಲ್ಲಿಯೂ ಪ್ರತ್ಯೇಕವಾಗಿ ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು ಬಹುಮಾನವನ್ನು ಕಾರ್ಯಕ್ರಮದಂದು ರಾಷ್ಟ್ರಮಟ್ಟದ ನಾಯಕರ ಸಮ್ಮುಖದಲ್ಲಿ ವಿತರಿಸಲಾಗುವುದು. ಭಾಗವಹಿಸುವವರಿಗೆ ಸಂಬಂಧಿಸಿದ ಪುಸ್ತಕವನ್ನೂ ನೀಡಲಾಗುವುದು. ಪ್ರಬಂಧವು 500 ರಿಂದ 600 ಪದಗಳಿಗೆ ಸೀಮಿತವಾಗಿರಬೇಕು ಎಂದು ಹೇಳಿದರು.
ನಾರಾಯಣ ಗುರುಗಳು ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿರದೆ ಮನುಕುಲಕ್ಕೆ ಆದರ್ಶವಾದವರು. ಅವರ ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ಮನ್ನಾರ್ ಮನ್ನನ್ ಮಾತನಾಡಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಸೂಚನೆ ಹಾಗೂ ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲೆಯಲ್ಲಿಯೂ ಯುವ ಕಾಂಗ್ರೆಸ್ ಅನ್ನು ಶಕ್ತಿಯುತವಾಗಿ ಸಂಘಟಿಸಲಾಗುವುದು ಎಂದರು.
ಮುಖಂಡರಾದ ಸರ್ಫರಾಜ್, ರಮಾನಂದ ಪೂಜಾರಿ, ಸೌಹಾನ್, ನವೀದ್ ಅಖ್ತರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.