ದಾವಣಗೆರೆ: ’ರೈತರು ಹತ್ತಿಯನ್ನು ತಡವಾಗಿ ಬಿತ್ತನೆ ಮಾಡಿರುವ ಕಾರಣ ಹತ್ತಿ ಹೂ ಬಿಟ್ಟಿಲ್ಲ’ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ್ ಉಪ ಲೋಕಾಯುಕ್ತರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ರೈತರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗೊಲ್ಲರ್ ಅವರ ಪ್ರತಿಕೃತಿ ದಹಿಸಿದರು.
ಜಿಲ್ಲೆಯಲ್ಲಿ ರೈತರು 26 ಸಾವಿರ ಎಕರೆಯಲ್ಲಿ ಕನಕ ಹತ್ತಿ ಬಿತ್ತನೆ ಮಾಡಿದ್ದಾರೆ. ಅಷ್ಟೂ ಬೆಳೆ ಹೂಬಿಟ್ಟಿಲ್ಲ. ಸಾಲ ಮಾಡಿ ಬೇಸಾಯ ಮಾಡಿರುವ ರೈತರು ಆತಂಕದ ಸ್ಥಿತಿಯಲ್ಲಿದ್ದರೆ, ರೈತರ ಹಿತ ಕಾಯಬೇಕಾದ ಅಧಿಕಾರಿ ಗೊಲ್ಲರ್ ಉಪ ಲೋಕಾಯುಕ್ತರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುವ ಬದಲು ತಪ್ಪು ಮಾಹಿತಿ ನೀಡುವ ಮೂಲಕ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಚ್ಚವ್ವನಹಳ್ಳಿ ಮಂಜುನಾಥ ಆರೋಪಿಸಿದರು
ಹತ್ತಿ ಬೆಳೆದ ರೈತರು ಪ್ರತಿ ಎಕರೆಗೆ ರೂ 50 ಸಾವಿರ ನಷ್ಟ ಅನುಭವಿಸಿದ್ದಾರೆ. ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡದೇ ವರದಿ ತಯಾರಿಸಿದ್ದಾರೆ. ಇಂತಹ ವರದಿಯನ್ನು ಉಪ ಲೋಕಾಯುಕ್ತರಿಗೆ ನೀಡಿದ್ದಾರೆ ಎಂದು ದೂರಿದರು.
ಹೊನ್ನೂರು ಮಂಜಪ್ಪ, ಸಿದ್ದವೀರಪ್ಪ, ನರಸೀಪುರ ಮಂಜುನಾಥ, ಶ್ರೀಕಂಠಾಪುರ ಆಂಜನೇಯ, ನಾಗನೂರು ಕರಿಬಸಪ್ಪ, ಕುಂದುವಾಡ ಚಂದ್ರ, ಗೋಶಾಲೆ ಬಸವರಾಜ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.