ದಾವಣಗೆರೆ: ಕರಾವಳಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಅನಧಿಕೃತ ರೆಸಾರ್ಟ್ ಹಾಗೂ ಹೋಂ ಸ್ಟೇಗಳ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಘಟಕ ಒತ್ತಾಯಿಸಿದೆ.
ಮಂಗಳೂರಿನಲ್ಲಿ ಈಚೆಗೆ ನಡೆದ ದಾಳಿಯಲ್ಲಿ ಅನವಶ್ಯಕವಾಗಿ ವೇದಿಕೆಯ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದನ್ನು ವೇದಿಕೆ ಖಂಡಿಸುತ್ತದೆ. ಇಂತಹ ಘಟನೆಗಳು ಮರುಕಳುಹಿಸದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ವೇದಿಕೆಯ ಪ್ರಾಂತ ಕಾರ್ಯದರ್ಶಿ ದೀಪಕ್ ರಾನಡೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಅನಧಿಕೃತ ರೆಸಾರ್ಟ್, ಹೋಂ ಸ್ಟೇಗಳಿಗೆ ಕಡಿವಾಣ ಹಾಕಬೇಕು. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಡ್ರಗ್ಸ್ ಹಾಗೂ ಸೆಕ್ಸ್ ಮಾಫಿಯಾ ನಡೆಯುತ್ತಿದ್ದು, ಅದನ್ನು ಪೊಲೀಸರು ಬಗ್ಗುಬಡಿಯಬೇಕು. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಮಾದಕ ದ್ರವ್ಯ ವ್ಯಸನಕ್ಕೆ ಎಳೆಯುವ ಪಬ್, ಲೈವ್ಬ್ಯಾಂಡ್, ಡಿಸ್ಕೋ ಥೆಕ್ಗಳನ್ನು ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.
ಅಂತರರಾಜ್ಯ ಕ್ರಿಮಿನಲ್ಗಳು ಹಾಗೂ ಭೂಗತ ಮಾಫಿಯಾ ದೊರೆಗಳು ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸಿ, ಇಂತಹ ರೆಸಾರ್ಟ್, ಹೋಂ ಸ್ಟೇಗಳನ್ನು ಅಡಗುತಾಣ ಇಲ್ಲವೇ ಮೋಜಿನ ತಾಣಗಳನ್ನಾಗಿಸಿಕೊಂಡಿರುತ್ತಾರೆ. ಇಂಥ ರೆಸಾರ್ಟ್, ಹೋಂ ಸ್ಟೇಗಳ ಮೇಲೆ ಕಡಿವಾಣ ಹಾಕಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಘಟಕದ ಸಂಚಾಲಕ ಸತೀಶ ಪೂಜಾರಿ, ಜಿಲ್ಲಾ ಸಹ ಸಂಚಾಲಕ ಮೃತ್ಯುಂಜಯ, ಪದಾಧಿಕಾರಿಗಳಾದ ಮಂಜುನಾಥ, ಶಿವಾಜಿ, ಡಿ.ವಿ. ಪ್ರಶಾಂತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.