ADVERTISEMENT

ಅನುಭಾವ, ಕಾಯಕ ಶ್ರದ್ಧೆ ವಚನಕಾರರ ಶಕ್ತಿ

ದಲಿತ ವಚನಕಾರರ ಜಯಂತಿ ಸಮಾರಂಭದಲ್ಲಿ ಸಾಹಿತಿ ಕೆ.ಬಿ.ಸಿದ್ದಯ್ಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 4:39 IST
Last Updated 11 ಮಾರ್ಚ್ 2017, 4:39 IST
ದಾವಣಗೆರೆ: ಅನುಭಾವ, ಕಾಯಕಶ್ರದ್ಧೆಯೇ ವಚನಕಾರರ ಶಕ್ತಿ. ನಡೆದಂತೆ ನುಡಿದ, ನುಡಿದಂತೆ ನಡೆದ, ನಡೆ-ನುಡಿ ಒಂದಾಗಿ ಬದುಕಿದ ಹೆಗ್ಗಳಿಕೆ 12ನೇ ಶತಮಾನದ ವಚನಕಾರರದ್ದು ಎಂದು ಸಾಹಿತಿ ಕೆ.ಬಿ.ಸಿದ್ದಯ್ಯ ಹೇಳಿದರು.
 
ನಗರದ ಕುವೆಂಪು ಕನ್ನಡಭವನ ದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಚಮ್ಮಾರಿಕೆ ಕಾಯಕ, ಜೀವನಾನು ಭವ, ಸತ್ಯ ಶುದ್ಧ ಕಾಯಕದಿಂದ ಬದುಕು ನಡೆಸಿದ ಆದರ್ಶ ಮಾದಾರ ಚನ್ನಯ್ಯ ಅವರದ್ದು. ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರನ್ನು ಕೇವಲ ದಲಿತ ವಚನಕಾರರು ಎಂದರೆ ಶುಶ್ಕವಾಗುತ್ತದೆ. ಅವರು ಅನುಭಾವಿಗಳು. ದಲಿತ ಎಂಬುದು ಜಾತಿ ಸೂಚಕವಲ್ಲ ಎಂದು ತಿಳಿಸಿದರು. 
 
‘ನಾವು ಯಾವ ತತ್ವದ ನೆಲೆಗಟ್ಟಿನ ಮೇಲೆ ದಲಿತ ವಚನಕಾರರನ್ನು ಅಧ್ಯಯನ ಮಾಡಬೇಕು ಎಂಬುದೇ ಸವಾಲಾಗಿದೆ. ದೇವರ ದಾಸಿಮಯ್ಯ ಹೇಳಿದಂತೆ ದಲಿತ ವಚನಕಾರರನ್ನು ಅವರಂತೇ ಒಡಲುಗೊಂಡು ನೋಡುವುದನ್ನು ಕಲಿಯಬೇಕು. ಭಿನ್ನವಾದ ದೃಷ್ಟಿಯಿಂದ ನೋಡಬೇಕು ಆಗ ಅದಕ್ಕೆ ಅರ್ಥ ಬರುತ್ತದೆ’ ಎಂದು ಹೇಳಿದರು.
 
ಇವರನ್ನು ದಲಿತ ಎಂದು ಕರೆದವರು ಯಾರು? ಕಾಯಕದ ದೃಷ್ಟಿಯಿಂದ ಮಾತ್ರ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು. ಹಾಗೆಯೇ ಜಾತಿಯನ್ನು ನಿರಾಕರಿಸುತ್ತಾ ಬಂದಿದ್ದರು. ದಲಿತ ಎಂಬ ಶಬ್ದಕ್ಕೆ ಅವರ ನಿಜಸ್ಥಿತಿ ತಿಳಿಸುವ ಶಕ್ತಿ ಇಲ್ಲ. ಕೇವಲ ದಲಿತ, ಅಸ್ಪೃಶ್ಯ ಎಂದು ನಾಮಾಂಕಿತಗೊಳಿಸುವುದು ಸೂಕ್ತವಲ್ಲ. ಅವರ ವಚನದ ತುಂಬ ಇರುವುದು ಕಾಯಕ, ಚಮ್ಮಾರಿಕೆ ಎಂದು ಹೇಳಿದರು.
 
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತ ನಾಡಿ, ವಚನಕಾರರು ತಮ್ಮ ಅನುಭವದ ನೆಲೆಯಲ್ಲಿ ತತ್ವಗಳನ್ನು ಕಟ್ಟಿ ಕೊಟ್ಟಿರು ವುದು ಅವರು ಎಲ್ಲರಿಗಿಂತ ಮೇಲುಗೈ ಸಾಧಿಸಿರುವುದಕ್ಕೆ ಕಾರಣ ಎಂದು ತಿಳಿಸಿದರು.
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ನಮ್ಮ ಹೆಮ್ಮೆಯ ವಚನಕಾರರು’ ಮಡಿಕೆ ಪತ್ರ ಬಿಡುಗಡೆ ಮಾಡಲಾಯಿತು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವಂತಪ್ಪ, ತಹಶೀಲ್ದಾರ್ ಸಂತೋಷ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕುಮಾರ್ ಹನುಮಂತಪ್ಪ ಇದ್ದರು. ದೀಪಕಮಲ ಸಂಗೀತ ಶಾಲಾ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.