ADVERTISEMENT

ಇಂದು ಕಾಂಗ್ರೆಸ್ ಸಭೆ, ನಾಳೆ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 8:05 IST
Last Updated 13 ಅಕ್ಟೋಬರ್ 2012, 8:05 IST

ದಾವಣಗೆರೆ: ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿ ಇರುವ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಕಚೇರಿಯಲ್ಲಿ ಅ. 13ರಂದು ಬೆಳಿಗ್ಗೆ 11ಕ್ಕೆ ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.

ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾಗವಹಿಸುವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶೀಘ್ರದಲ್ಲೇ ವಿಧಾನಸಭೆ ಹಾಗೂ ಪಾಲಿಕೆಗೆ ಚುನಾವಣೆ ಘೋಷಣೆ ಆಗಲಿದ್ದು, ಇದಕ್ಕೆ ಪೂರಕವಾಗಿ ಪಕ್ಷವನ್ನು ಸನ್ನದ್ಧಗೊಳಿಸುವ ಅಗತ್ಯ ಇದ್ದು, ವಾರ್ಡ್‌ಗಳ ಚುನಾಯಿತ ಪ್ರತಿನಿಧಿಗಳೂ ಭಾಗವಹಿಸಬೇಕು ಎಂದು ಕೋರಿದರು.

ಮೀಸಲಾತಿ ನ್ಯಾಯಸಮ್ಮತ ಆಗಿರಲಿ: ಮುಂದೆ ಬರುವ ಪಾಲಿಕೆ ಚುನಾವಣೆಗೆ ಸರ್ಕಾರ ರೂಪಿಸುವ ವಾರ್ಡ್‌ವಾರು ಮೀಸಲಾತಿ ಪಾರದರ್ಶಕವಾಗಿರಲಿ. ಒತ್ತಡಕ್ಕೆ ಮಣಿದು ಮೀಸಲಾತಿ ನೀಡಿದರೆ ಕೋರ್ಟ್ ಮೆಟ್ಟಿಲು ಏರಲಾಗುವುದು ಎಂದು ಎಚ್ಚರಿಸಿದರು.

ನಾಳೆ ಪದಗ್ರಹಣ ಸಮಾರಂಭ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅ. 14ರಂದು ಮಧ್ಯಾಹ್ನ 12.30ಕ್ಕೆ ಪಕ್ಷದ ವಿವಿಧ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆಕ್ಷೇಪ: ಕೇಂದ್ರ ಸರ್ಕಾರದ ಯೋಜನೆಗಳಿಗೆ ನೆಹರು ವಂಶಸ್ಥರ ಹೆಸರು ಇಡುವ ಬಗ್ಗೆ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಟೀಕೆ ಮಾಡಿರುವುದಕ್ಕೆ ಡಿ. ಬಸವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಾಗಪ್ಪ ಹೇಳಿಕೆ ಸತ್ಯಕ್ಕೆ ದೂರ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬ ಮಾಜಿ ಸಚಿವ ಡಾ.ವೈ. ನಾಗಪ್ಪ ಹೇಳಿಕೆ ಸತ್ಯಕ್ಕೆ ದೂರ. ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದು ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ನಲ್ಕುಂದ ಹಾಲೇಶ್, ಎ. ನಾಗರಾಜ್, ಕಡತಿ ತಿಪ್ಪಣ್ಣ, ಪದ್ಮ ವೆಂಕಟೇಶ್, ಚೈತನ್ಯ ಕುಮಾರ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.