ADVERTISEMENT

ಇಂದು ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 9:20 IST
Last Updated 19 ಅಕ್ಟೋಬರ್ 2011, 9:20 IST

ದಾವಣಗೆರೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅ. 19ರಂದು ಬೆಳಿಗ್ಗೆ11ಕ್ಕೆ ಚುನಾವಣೆ ನಡೆಯಲಿದೆ.

ಅಧ್ಯಕ್ಷರಾಗಿದ್ದ ಬಿಜೆಪಿಯ ಬಸವಲಿಂಗಪ್ಪ, ಉಪಾಧ್ಯಕ್ಷ ಟಿ. ಮುಕುಂದ ಅವರ ರಾಜೀನಾಮೆಯಿಂದ ಸ್ಥಾನ ತೆರವಾಗಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಗಾದಿಗೆ ಕೊಂಡಜ್ಜಿ ಕ್ಷೇತ್ರದ ವೀರೇಶ್ ಹನಗವಾಡಿ ಹಾಗೂ ಅಣಜಿ ಕ್ಷೇತ್ರದ ಚಿದಾನಂದಪ್ಪ ಆಕಾಂಕ್ಷಿಗಳಾಗಿದ್ದಾರೆ.

ಹಾಗೆಯೇ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ಆನಗೋಡು ಕ್ಷೇತ್ರದ ಜಿ.ಪಂ. ಸದಸ್ಯೆ ಯಶೋದಮ್ಮ ಹಾಲೇಶಪ್ಪ ಹಾಗೂ ಸಂತೆಬೆನ್ನೂರು ಕ್ಷೇತ್ರದ ಪ್ರೇಮಾ ಸಿದ್ದೇಶ್ ಆಕಾಂಕ್ಷಿಯಾಗಿದ್ದಾರೆ.

ಜಿಲ್ಲಾ ಪಂಚಾಯ್ತಿಯ ಒಟ್ಟು 34 ಸ್ಥಾನಗಳಲ್ಲಿ ಬಿಜೆಪಿ 18, ಕಾಂಗ್ರೆಸ್ 16 ಸ್ಥಾನಗಳನ್ನು ಗಳಿಸಿದ್ದು, ಬಿಜೆಪಿ ಬಹುಮತ ಗಳಿಸಿತ್ತು. ಪಕ್ಷದ ನಿರ್ಧಾರದಂತೆ ಬಸವಲಿಂಗಪ್ಪ ಸಾಮಾನ್ಯ ವರ್ಗದಿಂದ ಅಧ್ಯಕ್ಷರಾಗಿ ಹಾಗೂ  ಪರಿಶಿಷ್ಟ ಪಂಗಡದಿಂದ ಟಿ. ಮುಕುಂದ ಉಪಾಧ್ಯಕ್ಷರಾಗಿ 8ತಿಂಗಳು ಅಧಿಕಾರ ಅವಧಿ ಪೂರೈಸಿದ್ದಾರೆ. ಪಕ್ಷ ಹೊಂದಾಣಿಕೆಯಂತೆ ಅವರು ರಾಜೀನಾಮೆ ಸಲ್ಲಿಸಿರುವುದರಿಂದ ಈ ಸ್ಥಾನಗಳು ತೆರವಾಗಿದ್ದವು.

ಪಕ್ಷ ಸಿದ್ಧಾಂತಕ್ಕೆ ಬದ್ಧ: ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಕೋರ್ ಕಮಿಟಿ ನಿರ್ಧಾರದಂತೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಡಿ.ಎಸ್. ಶಿವಶಂಕರ್ ಹೇಳಿದ್ದಾರೆ.

ಆದರೆ, ಅಧ್ಯಕ್ಷರ ಸ್ಥಾನ ಹರಿಹರ ಕ್ಷೇತ್ರದವರ ಪಾಲಾದರೆ; ಉಪಾಧ್ಯಕ್ಷರ ಸ್ಥಾನಕ್ಕೆ ದಾವಣಗೆರೆಯವರಿಗೆ ಅವಕಾಶ ಕಲ್ಪಿಸಲಾಗುವುದು. ಒಂದು ವೇಳೆ ದಾವಣಗೆರೆಯವರಿಗೆ ಅಧ್ಯಕ್ಷರ ಪಟ್ಟ ಗಿಟ್ಟಿದರೆ; ಹೊರಗಿನವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ನಿರ್ಧಾರ ಪಕ್ಷದ ಕೋರ್ ಕಮಿಟಿ ಕೈಗೊಳ್ಳಬಹುದು ಎನ್ನುತ್ತಾರೆ ಜಿ.ಪಂ. ಮಾಜಿ ಉಪಾಧ್ಯಕ್ಷ ಟಿ. ಮುಕುಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.