ADVERTISEMENT

ಉದ್ಯಾನ ಅಭಿವೃದ್ಧಿಗೆ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 5:30 IST
Last Updated 18 ಏಪ್ರಿಲ್ 2011, 5:30 IST
ಉದ್ಯಾನ ಅಭಿವೃದ್ಧಿಗೆ ಸಹಕಾರ ಅಗತ್ಯ
ಉದ್ಯಾನ ಅಭಿವೃದ್ಧಿಗೆ ಸಹಕಾರ ಅಗತ್ಯ   

ದಾವಣಗೆರೆ: ನಗರದ ಪಾರ್ಕ್ ಅಭಿವೃದ್ಧಿಗೆ ನಾಗರಿಕರು ಕೈಜೋಡಿಸಿದಲ್ಲಿ ಪಾಲಿಕೆ ಸ್ಪಂದಿಸಲು ಬದ್ಧ ಎಂದು ಮೇಯರ್ ಎಂ.ಎಸ್. ವಿಠಲ್ ಹೇಳಿದರು.ನಗರದ ಎಂಸಿಸಿ ‘ಬಿ’ ಬ್ಲಾಕ್‌ನ 6ನೇ ಮುಖ್ಯರಸ್ತೆಯಲ್ಲಿರುವ ಮಕ್ಕಳ ಉದ್ಯಾನದಲ್ಲಿ ಮನೋರಂಜನಾ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
 

ನಗರದಲ್ಲಿ 108 ಕಡೆ ಉದ್ಯಾನಕ್ಕಾಗಿ ಸ್ಥಳ ಗುರುತಿಸಲಾಗಿದೆ. 92 ಕಡೆಗಳಲ್ಲಿ ಆವರಣ ನಿರ್ಮಿಸಲಾಗಿದೆ. ಮುಂದೆ ಬರುವ ಮುಖ್ಯಮಂತ್ರಿ ಅನುದಾನದಲ್ಲಿ ಎಲ್ಲ ಉದ್ಯಾನಗಳಲ್ಲಿ ಗಿಡ ನೆಡಲು ಕ್ರಮ ಕೈಗೊಳ್ಳಲಾಗುವುದು. ದಾವಣಗೆರೆಯನ್ನು ಉದ್ಯಾನ ನಗರವನ್ನಾಗಿಸಬೇಕು ಎಂಬ ಕನಸು ಇದೆ. ತಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ರೀತಿಯಲ್ಲೇ ಉದ್ಯಾನಗಳನ್ನೂ ಇಟ್ಟುಕೊಳ್ಳಬೇಕು. ನಾಗರಿಕರು ಮುಂದೆ ಬಂದಲ್ಲಿ ಉಳಿದ ಸೌಲಭ್ಯ ಕಲ್ಪಿಸಲು ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ ಕಾಪಾಡಲು, ವಿಹಾರಕ್ಕೆ, ಮಕ್ಕಳ ಆಟಕ್ಕೆ ಪ್ರತಿಯೊಂದಕ್ಕೂ ಉದ್ಯಾನ ಬೇಕಾಗುತ್ತದೆ. ಅದು ಪರಿಸರದ ಒಂದು ಭಾಗವಾಗಿಯೇ ಇರುತ್ತದೆ. ನಗರದ ಎಲ್ಲ ಉದ್ಯಾನಗಳಿಗೆ ಹಂತ-ಹಂತವಾಗಿ ಮೆರುಗು ನೀಡಲಾಗುತ್ತದೆ. ಅದರಲ್ಲಿ ಮನೋರಂಜನಾ ವೇದಿಕೆ ಹೊಸ ಪರಿಕಲ್ಪನೆ ಎಂದು ಬಣ್ಣಿಸಿದರು.ನಾಗರಿಕ ಹಿತರಕ್ಷಣಾಸಮಿತಿ ಅಧ್ಯಕ್ಷ ಡಾ.ಜಿ.ಸಿ. ಬಸವರಾಜ್ ವೇದಿಕೆ ಉದ್ಘಾಟಿಸಿದರು. ಪಾಲಿಕೆ ಸದಸ್ಯೆ ಜ್ಯೋತಿ ಸಿದ್ದೇಶ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು.
 

ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಜಿ.ಎಸ್. ಪರಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ದಾನಿಗಳಾದ ನಲ್ಲೂರು ಯಮುನಾಬಾಯಿ, ರಾಜ್‌ಕುಮಾರ್ ಮತ್ತು ಬಿ.ವಿ. ಮಹೇಶ್ಚಂದ್ರ ಬಾಬು ಅವರನ್ನು ಸನ್ಮಾನಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.