ADVERTISEMENT

ಕಲಾವಿದ ಸಮಾಜದ ಆಸ್ತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 6:25 IST
Last Updated 15 ಫೆಬ್ರುವರಿ 2011, 6:25 IST

ದಾವಣಗೆರೆ: ಕಲಾವಿದ ಸಮಾಜದ ಆಸ್ತಿಯಾದರೆ ಕಲೆ ದೇಶದ ಆಸ್ತಿ ಎಂದು ಮೈಸೂರಿನ ಡಿಎಂಎಸ್ ಲಲಿತಕಲಾ ಮಹಾಸಂಸ್ಥಾನದ ಡೀನ್ ಪ್ರೊ.ವಿ.ಬಿ. ಹಿರೇಗೌಡರ್ ಹೇಳಿದರು.
ನಗರದ ವಿಶ್ವವಿದ್ಯಾಲಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಬಿ. ಶಶಿಕಿರಣ್ ದೇಸಾಯಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದನ ಅನುಭವದ ಹಿನ್ನೆಲೆಯಲ್ಲಿ ಕೆನೆಗಟ್ಟಿದ ಕೃತಿಗಳು ಹೊರಬರಬೇಕು. ಅವನ ಅನುಭವದ ಸತ್ಯಗಳ ಜತೆ ಅದು ಇರಬೇಕು. ಕಲಾವಿದನ ನೈಜ ಗುಣಗಳನ್ನು ಕೃತಿಯಲ್ಲಿ ತುಂಬಬೇಕು. ಮಾರಾಟದ ಉದ್ದೇಶಕ್ಕಾಗಿ ಕೃತಿ ರಚಿಸಬಾರದು. ಹಾಗೆ ಮಾಡಿದರೆ ಅದರಲ್ಲಿ ಸತ್ವ ಇರುವುದಿಲ್ಲ ಎಂದರು.

ಕಲಾ ಶಾಲೆಗಳಲ್ಲಿ ಇಂಥ ಪ್ರದರ್ಶನ ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೂ ಸಹಕಾರಿ. ಇಲ್ಲಿ ಕಲಾವಿದನೊಂದಿಗೆ ಸಂವಾದ ಮಾಡಲು ಅವಕಾಶವಿದೆ. ಇಂದು ನವ್ಯತೆ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳ ಮಧ್ಯೆ ತೊಳಲಾಟವಿದೆ. ನಿರಂತರ ಚಿತ್ರಕಲೆಯನ್ನು ಅನುಸರಿಸುವವರು ಸಾಧನೆ ಮಾಡುತ್ತಾರೆ. ಕಲಾವಿದನಿಗೆ ತನ್ನ ಅನುಭವದ ಸತ್ಯಗಳನ್ನು ಸಾರುವ ಮಾಧ್ಯಮ ಎಂದರು.1974ರ ಬಳಿಕ ಲಲಿತಕಲಾ ಅಕಾಡೆಮಿ ಹೊಸ ಆಯಾಮ ಪಡೆಯಿತು. ಕೇವಲ ಕಲಾವಿದರಿಗೆ ಮಾತ್ರವಲ್ಲದೆ ಉದಯೋನ್ಮುಖ ಕಲಾವಿದರಿಗೂ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಾಕಿಕೊಂಡಿದೆ. ಶಶಿಕಿರಣ್ ದೇಸಾಯಿ ಅವರ ಚಿತ್ರಕಲಾ ಪ್ರದರ್ಶನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಹಿರಿಯ ಚಿತ್ರ ಕಲಾವಿದ ಮಲ್ಲಿಕಾರ್ಜುನ ಜಾಧವ್ ಮಾತನಾಡಿ, ಚಿತ್ರ ಕೇವಲ ಬಣ್ಣ, ರೇಖೆ, ಆಕಾರವಲ್ಲ. ಮನಸ್ಸಿನಿಂದ ಮೂಡಿರುವಂಥದ್ದು. ಚಿತ್ತದಿಂದ ಮೂಡಿರುವುದೇ ಚಿತ್ರ ಎಂದು ಹೇಳಿದರು.ಲಲಿತಕಲಾ ವಿದ್ಯಾಲಯದ ಸಂಯೋಜನಾಧಿಕಾರಿ ಸಿ.ಕೆ. ಶ್ರೀನಿವಾಸ, ಲಲಿತಕಲಾ ಅಕಾಡೆಮಿ ಸದಸ್ಯ ಕಿಶೋರ್ ಕುಮಾರ್ ಇದ್ದರು. ಬಿ.ಎಸ್. ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಮೊಬೈಲ್ ಪ್ರಾರ್ಥನೆ: ಕಾರ್ಯಕ್ರಮದ ಆರಂಭದಲ್ಲಿ ನಿರೂಪಕರು ‘ಈಗ ಪ್ರಾರ್ಥನೆ’ ಎಂದು ಹೇಳಿದಾಗ ಲಲಿತಕಲಾ ಕಾಲೇಜಿನಲ್ಲಿ ಅಷ್ಟು ವಿದ್ಯಾರ್ಥಿಗಳಿದ್ದರೂ ಹಾಡುವವರು ಯಾರೂ ಇರಲಿಲ್ಲ. ಕೊನೆಗೆ ನಿರೂಪಕರು ತಮ್ಮ ಮೊಬೈಲ್ ತೆಗೆದು ‘ತನುವು ನಿನ್ನದು ಮನವು ನಿನ್ನದು’ ಹಾಡನ್ನು ಚಾಲನೆ ಮಾಡಿ ಮೈಕ್ ಮುಂದೆ ಹಿಡಿದರು. ಅಂತೂ ತಾಂತ್ರಿಕ ‘ಪ್ರಾರ್ಥನೆ’ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.