ADVERTISEMENT

ಕೆರೆ ಸಂರಕ್ಷಣೆ ಅರಿವು ಎಲ್ಲರಿಗೂ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:45 IST
Last Updated 20 ಮಾರ್ಚ್ 2012, 5:45 IST

ದಾವಣಗೆರೆ: ಕೆರೆಗಳು ಆಯಾ ಪ್ರದೇಶಗಳ ಜನರ ಜೀವನಾಡಿಗಳಿದ್ದಂತೆ; ಕೆರೆಗಳು ಅವಸನಾಗೊಳ್ಳುತ್ತಾ ಹೋದರೆ ಮಾನವ ಜನಾಂಗ ಕೂಡ ಅವಸಾನಗೊಳ್ಳಲಿದೆ. ಹಾಗಾಗಿ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಅತ್ಯಂತ ಅಗತ್ಯ ಎಂದು ಶಾಸಕ ಎಂ. ಬಸವರಾಜ ನಾಯ್ಕ ಅಭಿಪ್ರಾಯಪಟ್ಟರು.

ಸಮೀಪದ ಗೋಪನಾಳ್‌ನಲ್ಲಿ ಸೋಮವಾರ ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ ಅಡಿ ಪುನಶ್ಚೇತನಗೊಳಿಸಲಾಗಿದ್ದ ಕೆರೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಗೋಪನಾಳ್ ಕೆರೆಯ ಅಭಿವೃದ್ಧಿಗಾಗಿ ್ಙ 46 ಲಕ್ಷ ವೆಚ್ಚ ಮಾಡಲಾಗಿದೆ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ದಾಗಿನಕಟ್ಟೆ, ಅಗಸನಕಟ್ಟೆ, ಬಸವಾಪಟ್ಟಣ, ನಲ್ಕುಂದ, ಮಾಯಕೊಂಡ ಗ್ರಾಮದ ಕೆರೆಗಳ ಅಭಿವೃದ್ಧಿಗೆ ಸುಮಾರು ್ಙ 20 ಕೋಟಿ ಬಿಡುಗಡೆ ಮಾಡಲಾಗಿದೆ. ಕೆರೆ ಏರಿ ದುರಸ್ತಿ, ನೀರಾವರಿ ಕಾಲುವೆಗಳು, ತೂಬು, ಕೋಡಿ -ಇವುಗಳನ್ನು ದುರಸ್ತಿಗೊಳಿಸಿಕೊಂಡು ತಮ್ಮ ಗ್ರಾಮದ ಆಸ್ತಿಯನ್ನು ಕಾಪಾಡಿಕೊಂಡಿದ್ದಾರೆ. ಈ ಕೆರೆಯಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆದಿರುವುದರಿಂದ ಕಡೇ ಭಾಗದ ರೈತರ ಜಮೀನಿಗೂ ಕೆರೆಯ ನೀರು ಲಭಿಸುತ್ತದೆ ಎಂದರು.

ಜಿ.ಪಂ. ಸದಸ್ಯೆ ಸಹನಾ ರವಿ ಮಾತನಾಡಿ, ಕೆರೆ ನಿರ್ವಹಣೆ ಯೋಜನೆಯಡಿ ಮಹಿಳೆಯರಿಗೆ ಪುರಷರಷ್ಟೇ ಆದ್ಯತೆ ನೀಡಿ ಮಹಿಳಾ ಸಬಲೀಕರಣಕ್ಕೆ ಮಹತ್ವ ನೀಡಲಾಗಿದೆ ಎಂದರು.

ಜಲ ಸಂವರ್ಧನೆ ಯೋಜನೆಯ ದಾವಣಗೆರೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಆರ್.ಸಿ. ಮೋಹನ್ ಮಾತನಾಡಿದರು.

ತಾ.ಪಂ. ಸದಸ್ಯೆ ನಿರ್ಮಲಮ್ಮ ಕರಿಬಸಪ್ಪ, ಸಂಘದ ಕಾರ್ಯದರ್ಶಿ ಅಜಯ್ ಓ. ಗೋಪನಾಳ್, ಮಲ್ಲಿಕಾರ್ಜುನಯ್ಯ, ಎಚ್.ಕೆ. ಫಾಲಾಕ್ಷಪ್ಪ ಮಾತನಾಡಿದರು.

ಗೋಪನಾಳ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್.ಎಂ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ನಿರ್ದೇಶಕ ಎಚ್. ಹಾಲಪ್ಪ, ಸಂಘದ ಅಧ್ಯಕ್ಷ ಬಿ.ಎಸ್. ಶೇಖರಪ್ಪ, ಉಪಾಧ್ಯಕ್ಷೆ  ಗಿರಿಜಮ್ಮ, ಖಜಾಂಚಿ ಇಂದ್ರಮ್ಮ,  ಚಂದ್ರೇಗೌಡ, ಜಿ.ಎಂ. ಸುಧಾಕರ್, ಸಂವಹನ ತಜ್ಞ ಯಾದಲಗಟ್ಟೆ ಕೆ. ಜಗನ್ನಾಥ, ರಾಘವೇಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.