ADVERTISEMENT

ಕೇಂದ್ರದ ವಿರುದ್ಧ ಆಟೊ ಚಾಲಕರ ಆಕ್ರೋಶ

ಸಬ್ಸಿಡಿ ರಹಿತ ಎಲ್‌ಪಿಜಿ ಮತ್ತು ವಾಹನ ಬಳಕೆ ಗ್ಯಾಸ್‌ ದರ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 7:00 IST
Last Updated 4 ಜನವರಿ 2014, 7:00 IST

ದಾವಣಗೆರೆ: ಸಹಾಯಧನ ರಹಿತ ಎಲ್‌ಪಿಜಿ ಗ್ಯಾಸ್‌ ಮತ್ತು ಆಟೊರಿಕ್ಷಾ ಗ್ಯಾಸ್‌ ದರ ಏರಿಕೆ ಖಂಡಿಸಿ, ಫೆಡರೇಷನ್‌ ಆಫ್‌ ಕರ್ನಾಟಕ ಆಟೊ ಡ್ರೈವರ್‍ಸ್‌ ಯೂನಿಯನ್‌ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಆಟೊ ಚಾಲಕರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ₨ 220 ಹೆಚ್ಚಳ, ವಾಣಿಜ್ಯ ಸರಬರಾಜಿನ 19 ಕೆ.ಜಿ. ಸಿಲಿಂಡರ್‌ ಬೆಲೆ ₨ 353 ಹಾಗೂ ವಾಹನ ಬಳಕೆಯ ಬಂಕ್‌ಗಳಲ್ಲಿ 1 ಕೆ.ಜಿ. ಗ್ಯಾಸ್‌ ₨ 11.13 ಹೆಚ್ಚಿಸ ಲಾಗಿದೆ. ಇದು ಆಟೊ ಚಾಲಕರಿಗೆ, ಟ್ಯಾಕ್ಸಿ ಚಾಲಕರಿಗೆ ಹಾಗೂ ನಾಗರಿಕರಿಗೆ ಅತ್ಯಂತ ದುಬಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ರಸ್ತೆ ದುರಸ್ತಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಟೊ ಚಾಲಕರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವ  ಅಭಯ್‌ಚಂದ್ರ ಜೈನ್‌ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ದುಬಾರಿ ಆಗಿರುವ ಗ್ಯಾಸ್‌
ದರವನ್ನು ಈ ಕೂಡಲೇ ವಾಪಸ್‌ ಪಡೆಯಬೇಕು. ಎಲ್ಲ ಅಗತ್ಯ ವಸ್ತುಗಳ ದರ ಏರಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಆಟೊ ಕನಿಷ್ಠ ದರವನ್ನು ಹೆಚ್ಚಿಸಬೇಕು. ಮನೆ ಇಲ್ಲದ ಆಟೊ ಚಾಲಕರಿಗೆ ಮನೆ ಹಾಗೂ ನಿವೇಶನ ಕಲ್ಪಿಸಬೇಕು. ರಸ್ತೆ ದುರಸ್ತಿ ಮಾಡಬೇಕು. ನಗರದಲ್ಲಿ 6 ಗ್ಯಾಸ್‌ ಬಂಕ್‌ಗಳ ಅಗತ್ಯವಿದ್ದು, ಈ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಅಧ್ಯಕ್ಷ ಬಿ.ವಿಜಯಕುಮಾರ್‌, ಜಿ.ಬಿ. ನಾಗರಾಜ್‌, ಚಂದ್ರಪ್ಪ, ದಾದಾಪೀರ್‌, ಕೆ.ಶ್ರೀನಿವಾಸ್‌ಮೂರ್ತಿ, ಕರಿಬಸಪ್ಪ ಕಾಸವಾಳ, ಷಡಾಕ್ಷರಪ್ಪ, ಎಚ್‌.ಪರಶುರಾಮ್‌, ಎಂ.ಆರ್‌. ಪರಶುರಾಮಪ್ಪ, ಈರಣ್ಣ, ಎಚ್‌.ಅಣ್ಣಪ್ಪಸ್ವಾಮಿ, ಅನ್ವರ್‌ಸಾಬ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.