ADVERTISEMENT

ಖಾತ್ರಿ ಬಾಕಿ ವೇತನ ವಿಳಂಬ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 4:55 IST
Last Updated 5 ಅಕ್ಟೋಬರ್ 2012, 4:55 IST

ಹರಪನಹಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕರ್ತವ್ಯ ನಿರ್ವಹಿಸಿದ ಕಾರ್ಮಿಕರ ವೇತನ ಬಿಡುಗಡೆಗೆ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿರುವ ಗ್ರಾ.ಪಂ.ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಸಂಘಟನೆ ನೇತೃತ್ವದಲ್ಲಿ ನೂರಾರು ಕಾರ್ಮಿಕರು ತಾಲ್ಲೂಕಿನ ಚಿಗಟೇರಿ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಆವರಣದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗ್ರಾಮ ಪಂಚಾಯ್ತಿ ಕಚೇರಿ ತಲುಪಿದರು. ಬಳಿಕ, ಬಹಿರಂಗ ಸಭೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಸಂಘಟನೆಯ ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಯೋಜನೆ ಅಡಿ ಕಳೆದ ಐದು ತಿಂಗಳ ಹಿಂದೆ ಕರ್ತವ್ಯ ನಿರ್ವಹಿಸಿದ ಕಾರ್ಮಿಕರಿಗೆ, ಪಂಚಾಯ್ತಿ ಆಡಳಿತ ಮಂಡಳಿ ವೇತನ ಪಾವತಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ.
 
ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ವೇತನ ಪಾವತಿಸಲು ಈಗಾಗಲೇ ಎಲ್ಲಾ ನಿಯಮಾವಳಿ ಪೂರ್ಣಗೊಂಡಿದ್ದರೂ, ಯೋಜನೆಯ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಆಡಳಿತ ಮಂಡಳಿ ವೇತನ ಪಾವತಿಸಲು ಮೀನಮೇಷ ಎಣಿಸುತ್ತಿದೆ. ಹೀಗಾಗಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ವಿಫಲವಾಗಿರುವ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ಎಚ್. ಪರಶುರಾಮ್, ಮಾಳ್ಗಿ ಆನಂದಪ್ಪ, ಕೋಟೆ ಭೀಮಪ್ಪ, ದಂಡ್ಯಪ್ಪ, ವಿಮಲಮ್ಮ, ಪಾತಾಳ ಪರಸಪ್ಪ, ಕೆ. ಪರಶುರಾಮ, ಎಲ್. ಹನುಮಂತಪ್ಪ, ಎನ್. ಬಸಪ್ಪ, ರಮೇಶನಾಯ್ಕ,  ಎಸ್. ಜಯಪ್ಪ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಅಧಿಕಾರಿಗಳೇ ಹೊಣೆ
ಖಾತ್ರಿ ಯೋಜನೆ ಅಡಿ ಕರ್ತವ್ಯ ನಿರ್ವಹಿಸಿದ ಕಾರ್ಮಿಕರ ವೇತನ ಬಿಡುಗಡೆಯಲ್ಲಿ ವಿಳಂಬ ಉಂಟಾಗಲು ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ. ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಯೋಜನೆ ಅಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 650ಕ್ಕೂ ಅಧಿಕ ಕಾರ್ಮಿಕರು ಕರ್ತವ್ಯ ನಿರ್ವಹಿಸಿದ್ದಾರೆ.

ಒಟ್ಟಾರೆ ಸುಮಾರು ್ಙ 10ಲಕ್ಷ ಮೊತ್ತದ ವೇತನ ಅನುದಾನ ಬಿಡುಗಡೆ ಮಾಡಬೇಕು. ಆದರೆ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕೇವಲ 248 ಕಾರ್ಮಿಕರ ವೇತನ ಬಿಡುಗಡೆ ಮಾಡಿದ್ದಾರೆ. ಉಳಿದ ಕಾರ್ಮಿಕರ ವೇತನವನ್ನು ಬಿಡುಗಡೆ ಮಾಡಿ, ಒಟ್ಟಿಗೆ ಎಲ್ಲಾ ಕಾರ್ಮಿಕರಿಗೂ  ಸಾಮೂಹಿಕವಾಗಿ ವೇತನ ಪಾವತಿಸುತ್ತೇವೆ ಎಂದರೂ, ಕೇಲವ 248ಕಾರ್ಮಿಕರ ್ಙ 2.97ಲಕ್ಷ ಮೊತ್ತದ ವೇತನ ಬಿಡುಗಡೆ ಮಾಡಿ ಪಂಚಾಯ್ತಿ ಆಡಳಿತವನ್ನು ಪೇಚಿಗೆ ಸಿಲುಕಿಸಿದ್ದಾರೆ ಎಂದು ದೂಷಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.